Saturday 20 June 2020

ಕೋವಿಡ್ದು ಕೋಟೆಯ ನುಂಗಿತ್ತಾ

ಕೋವಿಡ್ದು ಕೋಟೆಯ ನುಂಗಿತ್ತಾ 
ನೋಡವ್ವಾ ತಂಗೀ
ಕೋವಿಡ್ದು ಕೋಟೆಯ ನುಂಗಿತ್ತಾ

ಇಲಿಯು ಬೆಕ್ಕನ್ನು ನುಂಗಿ
ಗಿಳಿಯು ಹಾವನ್ನು ನುಂಗಿ
ಹಾರಲು ಬಂದ ಬಾವಲಿಯನ್ನು
ಚೀನಾ ನುಂಗಿತ್ತಾ

ನೋಡವ್ವಾ ತಂಗೀ...

ಮಾಸ್ಕು ಮುಖವನ್ನು ನುಂಗಿ
ಗ್ಲೋವು ಬೆರಳನ್ನು ನುಂಗಿ
ಮುಚ್ಚಲು ತಂದ ಪ್ಲಾಸ್ಟೀಕು
ಮೈಯನು ನುಂಗಿತ್ತಾ

ನೋಡವ್ವಾ ತಂಗೀ...

ಚಿಲಕ ಬಾಗಿಲ ನುಂಗಿ
ಮನೆಯು ಆಫೀಸನು ನುಂಗಿ
ಅಡ್ಡಾಡಲು ಬಂದ ಅಣ್ಣನನ್ನು
ಲಾಠಿ ನುಂಗಿತ್ತಾ

ನೋಡವ್ವಾ ತಂಗೀ...

ದೇಶ ಕೋಶವ ನುಂಗಿ
ಆಳು ಒಡೆಯನ ನುಂಗಿ
ಮಾತಿಗೆ ನಿಂತ ಟ್ರಂಪನನ್ನು
ಮೈಕು ನುಂಗಿತ್ತಾ

ನೋಡವ್ವಾ ತಂಗೀ...

ಗುಡಿಯು ಗಡಿಯನ್ನು ನುಂಗಿ
ಮಡಿಯು ಮಲಿನವ ನುಂಗಿ
ಮೋಸಕೆ ನಿಂತ ಮರುಳರನ್ನು
ಸೇವೆಯು ನುಂಗಿತ್ತಾ

ನೋಡವ್ವಾ ತಂಗೀ... 

ಕೋವಿಡ್ದು ಕೋಟೆಯ ನುಂಗಿತ್ತಾ
ನೋಡವ್ವಾ ತಂಗೀ
ಕೋವಿಡ್ದು ಕೋಟೆಯ ನುಂಗಿತ್ತಾ!

ಮುರಳಿ ಹತ್ವಾರ್
೨೫/೦೪/೨೦೨೦

ಘಜಲ್: ಹೇಗೆ ಹೇಳಲಿ ನಿನಗೆ

ಘಜಲ್:

ಹೇಗೆ ಹೇಳಲಿ ನಿನಗೆ ನನ್ನ ಮನದ ಮಾತು
ಇಬ್ಬನಿ ತೊಳೆದ ನಸುಕಿನಲ್ಲಿ ಹೊಳೆದ ಮಾತು

ಉಷೆಯ ಲತೆಯಂತೆ ಬಳುಕಿ ಸರಿದಿರಲು ನೀ
ಒಡೆದ ಆ ಕೆಂಪು ಚಿಗುರಿನಲಿ ತೆರೆದ ಮಾತು

ಉರಿವ ಬಿಸಿಲ ಧಗೆ ಬೆವರ ಮಳೆ ಸುರಿದಿರಲು
ನಿನ್ನ ನೆರಳ ಆ ಸೆರಗುಗಳು ಪೊರೆದ ಮಾತು

ಮುನಿದ ಮುಗಿಲು ಇಳೆಗೆ ಇಳಿದ ಹಾಗೆ
ಹರಿದ ನಿನ್ನ ಕಣ್ಣ ಹನಿಗೆ ಮಣಿದ ಮಾತು

ಕೆಸರ ಹಾರಿ ದೂರ ದಾರಿ ಸಾಗುತಿರಲು
ನಿನ್ನ ಹೆಜ್ಜೆ ಗುರುತಿನಲ್ಲಿ ಕುಣಿದ ಮಾತು

ಹಿಮದ ಜಡದ ಇರುಳಲಿ ಬಿಸಿಯನೂದುತಲಿ
ಕಾಯುವ ಮುರಳಿಯ ಉಸಿರಿನಾಳದ ಮಾತು

ಮುರಳಿ ಹತ್ವಾರ್
೩೦.೦೪.೨೦೨೦

ಘಝಲ್: ನಿನ್ನದೇ ಹೆಸರು

ಘಝಲ್:

ನಿನ್ನದೇ ಹೆಸರು 

ಸುಳಿಸುಳಿವ ತಿಳಿಗಾಳಿಗೆ ಕಂಪಿಸುವ ಅಲೆಗಳಲಿ ನಿನ್ನದೇ ಹೆಸರು
ಹೊಳೆಹೊಳೆವ ನೀರ ಅಲೆ ಅರಳಿಸುವ ಹೂಗಳಲಿ ನಿನ್ನದೇ ಹೆಸರು

ಎಳೆಎಳೆಯ ಬಿಸಿಲಲಿ ಹೊಸಚಿಗುರು ತೆರೆವ ಶಿಶಿರದ ಆ ಕಿರಣದಲಿ 
ಚಿಲಿಪಿಲಿಯ ಇಂಚರದ ಹಕ್ಕಿಗಳ ಹಾಡಿನಲಿ ನಿನ್ನದೇ ಹೆಸರು

ಹನಿಹನಿಸಿ ನೆಲತಣಿಸಿ ಮನಮುದಿಸಿ ಸಾಗುವ ಮುಗಿಲಿನಾ ಮಡಿಲಲಿ
ಬಗೆಬಗೆಯ ಬಣ್ಣದ ಕಾಮನ ಬಿಲ್ಲಿನಲಿ ನಿನ್ನದೇ ಹೆಸರು

ನೆಗೆನೆಗೆದು ಧುಮಕಿ ಜುಳುಜುಳನೆ ಸರಿಯುವ ನದಿಗಳ ಆ ಬಳುಕಿನಲಿ 
ಅಲೆಅಲೆಯ ಅಪ್ಪುಗೆಗೆ ದಡಮಿಡಿವ ಸಾಗರದಲಿ ನಿನ್ನದೇ ಹೆಸರು

ಚಳಿಚಳಿಯ ಇರುಳು ಉಳಿಸಿದ ಇಬ್ಬನಿಯ ಮಸುಕಿನಾ ನಸುಕುಗಳಲಿ
ನೆನೆನೆನೆದು ರಾಧೆಯ ಕರೆಯುವ ಆ ಮುರಳಿಯಲಿ ನಿನ್ನದೇ ಹೆಸರು 

ಮುರಳಿ ಹತ್ವಾರ್
೧೯/೦೪/೨೦೨೦

ಘಜಲ್ : ಮತ್ತೆ ಬೇಕೆನಿಸಿದೆ...!

ಘಜಲ್ 



ಮತ್ತೆ ಬೇಕೆನಿಸಿದೆ...!

ತಂಪು ಕನ್ನಡಕಗಳ ಹೊಳೆಸಿದ ಆ ಕಿರಣಗಳು ಮತ್ತೆ ಬೇಕೆನಿಸಿದೆ 
ಕನಸಿನ ಹೊದಿಕೆಗಳಲಿ ಅರಳಿದ ಆ ಇರುಳುಗಳು ಮತ್ತೆ ಬೇಕೆನಿಸಿದೆ 

ಅಮ್ಮನ ಕೈತುತ್ತು ಅಪ್ಪನ ಬೆರಳು ಬರೆಸಿ ಬೆಳೆಸಿದ ಆ ಹೆಜ್ಜೆಯ ಗುರುತು 
ನಡೆದ ದಾರಿಗೆ ನೆರಳಿತ್ತ ತಂಪಿನಾ ಮರಗಳು ಮತ್ತೆ ಬೇಕೆನಿಸಿದೆ 

ಚಿಗುರೊಡೆದ ಮೀಸೆಯ ಹರೆಯ ತಾ ಚುಂಬಿಸಲು ನಾಚಿದಾ ಸವಿ ಹೃದಯ 
ಯೌವನದ ದಿನಗಳ ಶೃಂಗರಿಸಿದ ಗೆಳೆತನಗಳು ಮತ್ತೆ ಬೇಕೆನಿಸಿದೆ 

ಉರಿವ ಬಿಸಿಲ ಕ್ಷಣಗಳ ಪಯಣ ಕೆಲವೊಮ್ಮೆ ನಮ್ಮೀ ಜೀವನ ಯಾನ 
ಮೈಮರೆಸುವ ಅಮೃತ ಗಾನದ ಮುರಳಿಯ ಕೊರಳು ಮತ್ತೆ ಬೇಕೆನಿಸಿದೆ! 

ಮುರಳಿ ಹತ್ವಾರ್ 

ಎಲ್ಲೆ ದಾಟಿದ ಮನಗಳ ಮಟ್ಟ ಹಾಕುವದೇ ಈ #MeToo

ತಾಜಾ ಸುದ್ದಿ! 'ದ ಗ್ರೇಟ್' ಪತ್ರಕರ್ತ-ಸಂಪಾದಕ-ಮಂತ್ರಿ ಅಕ್ಬರನ ಬಲಿ ಸಿಕ್ಕಿದೆ, ಬೆಳೆಯುತ್ತಿರುವ #MeToo ಬಲೆಗೆ. ಸಿನೆಮಾದ ನಾನಾ ಪಾಟೇಕರ, ಅನು ಮಲ್ಲಿಕ, ಸಾಜಿದ್, ಗಣೇಶ....ಇತ್ಯಾದಿ, ಇತ್ಯಾದಿಗಳು #MeToo ಬೆಳಕಲ್ಲಿ ಬತ್ತಲಾಗಿದ್ದಾರೆ, ಆಗುತ್ತಿದ್ದಾರೆ. ಅಲ್ಲಲ್ಲಿ ಪಾದ್ರಿಗಳು, ಮಠಾಧಿಪತಿಗಳು, ಮುಲ್ಲಾಗಳನ್ನೂ ಮುಲಾಜಿಲ್ಲದೆ #MeToo ಮೆತ್ತಿಕೊಂಡಿದೆ.  ಈ   ಮೊದಲೇ ಸತ್ತಿರುವ ಹಲವು 'ಅಕ್ಬರರು' ಬದುಕಿದೆವು ಎಂದು ಸಮಾಧಿಯಲ್ಲೇ ನಿಟ್ಟುಸಿರು ಬಿಟ್ಟಿರಬೇಕು. ಅಧಿಕಾರದ ಅಹಂಕಾರದಲ್ಲಿ ಶಿಷ್ಟತೆಯ  ಎಲ್ಲೆ ಮೀರಿದ 'ಗಣ್ಯ'ರನೇಕರ ಚಡ್ಡಿಯನ್ನು ಜಾಡಿಸುತ್ತಿರುವ #MeToo ಮೂಮೆಂಟಿನ ಅವಲೋಕನದ ಪ್ರಯತ್ನ ಈ ಲೇಖನ.


#MeToo ಹೊರಕೆಡವುತ್ತಿರುವ ಹೇಸಿಗೆಯ ಕೆಲಸ ತುಂಬಾ ಹಳೆಯದು.  White supremacy, slavery, ಸಿಂಹಾಸನ, ಜಮೀನ್ದಾರಿ... ಹೀಗೆ ನಾನಾ ರೂಪಗಳಲ್ಲಿ , ಗಂಡು ಹೆಣ್ಣೆನ್ನದೆ, ಶೋಷಿತರ ಶೀಲ ತಮ್ಮ ಹಕ್ಕೆಂದು ಹರಿದು, ಜರಿದು, ಕರಿದು, ಸುಟ್ಟು, ತಿಂದು ತೇಗಿದವರ 'ಮಹಾಕಾರ್ಯ' ಇತಿಹಾಸದುದ್ದಕ್ಕೂ 'ಹೊಳೆಯುತ್ತಿದೆ'. ಅದೊಂದು ಕೊಳಕು ಸಾಗರ! ಬಗೆ ಬಗೆಯ ಸಂಶೋಧಕರು ತಮ್ಮ-ತಮ್ಮ ಬೊಗಸೆಗಳಲ್ಲಿ ಇದರ ಆಳ ಅಳೆಯಲು ಪ್ರಯತ್ನಿಸಿ ಸೋತರೂ, ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದಾರೆ.

ವಿಜ್ಞಾನಿಗಳು ಗಂಡು ಜೀವದಲ್ಲಿ ಮಾತ್ರ ಇರುವ Y ವಂಶವಾಹಿಯ ಜಾಡು ಹಿಡಿದು ದಾರಿ ಸಿಕ್ಕದೆ ಮುಂದೇನು ಎಂದು ಪ್ರಶ್ನಿಸುತ್ತಿದ್ದಾರೆ; Testosterone (ಟೆಸ್ಟೋಸ್ಟೆರೋನ್) ಹಾರ್ಮೋನ್ ಈ 'ಗಂಡು'ತನದ ಅಡಿಯಿರಬಹುದೇ ಎಂದು ಹುಡುಕಿ ತಳ ಸಿಕ್ಕದೆ ತಳಮಳಿಸಿದ್ದಾರೆ. ಹೆಚ್ಚಿನ ಎಲ್ಲಾ ಪ್ರಾಣಿಗಲ್ಲಿರುವ ಗಂಡು-ಹೆಣ್ಣಿನ ಭೇದಕ್ಕಿಂತ ಮಾನವ ಜೀವ ಭಿನ್ನವಾಗಿಲ್ಲದಿದ್ದರೂ, ಬೇರಾವ ಪ್ರಾಣಿಗಳಲ್ಲೂ ಕಾಣದ ಹೆಣ್ಣಿನೆಡೆಗಿನ ಈ ಭೇದ-ಭಾವದ ಕಾರಣ ವಿಜ್ಞಾನದ ನಿಲುಕಿಗೆ ಇನ್ನೂ ಸಿಕ್ಕಿಲ್ಲ. ಎಲ್ಲಾ ಹಾರ್ಮೋನುಗಳ ಕಾರ್ಯ-ನಿಯಂತ್ರಕ ಮೆದುಳಿನ ಮಧ್ಯವಿರುವ ಹೈಪೊಥಲಮಸ್ಸಿನ ಹಲವು ನಿಯಂತ್ರಕ ಹಾರ್ಮೋನುಗಳ ಕೆಲಸದ ಬಗ್ಗೆ ಹೆಚ್ಚು ತಿಳಿದಾಗ ಗೊತ್ತಾಗಬಹುದೇನೋ. ಕಿಸ್ಪೆಪ್ಟಿನ್ (kisspeptin) ಹೆಸರಿನ ಒಂದು ಹಾರ್ಮೋನು ಮಾನವ ಜಾತಿಯ ಪ್ರೀತಿ, ಸೆಕ್ಸ್ ಮುಂತಾದ ಭಾವನೆಗಳಿಗೂ; ಲೈಂಗಿಕ ಉತ್ತೇಜನ, ಬಸಿರು ಇಂತಹ ಕಾರ್ಯಗಳಿಗೂ ಮೂಲ ಇರಬಹುದೇ ಎಂದು ಹುಡುಕಬಹುದು ಎನ್ನುವಷ್ಟು ಕುರುಹು ಸಿಕ್ಕಿದೆ.

ಮನಶಾಸ್ತ್ರಜ್ನ್ಯರು (psychologists), ಮಾನವರಲ್ಲಿ ಗಂಡು ಹೆಣ್ಣನ್ನು ತನ್ನ ಸ್ವತ್ತೆಂದು ಭಾವಿಸಿರುವುದು ಕಾಲ, ಧಾರ್ಮ, ಅವಕಾಶಕ್ಕನುಗುಣವಾಗಿ ವ್ಯಕ್ತವಾಗುತ್ತಿದೆಯೆಂದು ಅರ್ಥೈಸಿದ್ದಾರೆ. ಕೆಲವೆಡೆ ಮೈ ತುಂಬಾ ಬಟ್ಟೆ ಹಾಕಿಕೊ೦ಡು ಮುಖ ಮುಚ್ಚಿಕೊಳ್ಳಿ ಎನ್ನುವದೂ, ಪರದೆಯ ಹಿಂದೆ ಅಡಗಿರಿ ಎನ್ನುವದೂ; ಕೆಲವೆಡೆ ಬಟ್ಟೆ ಬಿಚ್ಚಿ ಬೇಕಾದಹಾಗೆ ಬಳಸಿಕೊಳ್ಳುವದೂ; ಅಧಿಕಾರ, ಮತ, ಇನ್ನಿತರ ಹಕ್ಕುಗಳಿಂದ ಅವರನ್ನು ದೂರ ಇಡುವದೂ ಇವೆಲ್ಲವೂ ಒಂದೇ ಸ್ವಭಾವದ ವಿವಿಧ ರೂಪಗಳು ಎಂದು ಹೇಳಬಹುದು. ಅಲ್ಲದೆ, ಗಂಡು ತನ್ನ ಲೈಂಗಿಕ ಉತ್ತೇಜನಕ್ಕೂ ಹೆಣ್ಣನ್ನೇ ಅವಲಂಬಿಸಿರುವ ಕಾರಣ, ತನ್ನ ಬೇಕು-ಬೇಡಗಳ ಬಂಧನದಲ್ಲಿ ಹೆಣ್ಣನ್ನು ಕುಣಿಸುತ್ತಾ ಬಂದಿದ್ದಾನೆ. ತನ್ನ 'ಸತ್ತ ನರ'ಕ್ಕೆ ಜೀವ ತುಂಬಲು ದಿನಕ್ಕೊಂದು ೧೮-೨೦ ಪ್ರಾಯದ ಯುವತಿಯರ ಮಾನಭಂಗಕ್ಕೆ ಯತ್ನಿಸುತ್ತಿದ್ದ ಲಿಬ್ಯಾದ ಹಳೆಯ ನಾಯಕ ಗಡ್ಡಾಫಿ ಇದರ ಒಂದು ವಿಪರೀತ ಉದಾಹರಣೆಯಾದರೆ ತನ್ನ 'ಲಿಂಗ' ಸಂಪೂರ್ಣ ಹತೋಟಿಯಲ್ಲಿದೆ ಎಂದು ತೋರಿಸುವ ಚಪಲದಲ್ಲಿ, ತನ್ನ ಇಳಿವಯಸ್ಸಿನಲ್ಲಿ, ತುಂಬು ಪ್ರಾಯದ ಇಬ್ಬರು ಯುವತಿಯರನ್ನ ಬತ್ತಲೆ ಮಲಗಿಸಿ ಅವರ ಮಧ್ಯದಲ್ಲಿ ಸಂಪೂರ್ಣ ಬತ್ತಲಾಗಿ ಮಲಗುತ್ತಿದ್ದ ಭಾರತದ ಸತ್ಯಾನ್ವೇಷಕ ಮಹಾಪುರುಷ ಗಾಂಧೀಜಿ ಇನ್ನೊಂದು ದಿಕ್ಕಿನ ವಿಪರೀತ ಉದಾಹರಣೆ. ಇವೆರಡರ ಮಧ್ಯದಲ್ಲೊಂದು ಸಣ್ಣ ಚುಕ್ಕೆಯಷ್ಟೇ ಈಗ ದೊಡ್ಡದಾಗಿ ಕಾಣುತ್ತಿರುವ #MeToo.


ಬಿಲ್ ಕ್ಲಿಂಟನ್ ತನ್ನ ಆಫೀಸಿನ ಮೋನಿಕೆಯ ಎದುರು ಬತ್ತಲಾಗಿ, ಬಾ ಎಂದು ಕರೆದಾಗ, ಪ್ರಕೃತಿಯ ಪಸಂದಾಗಿಸುವ ಕಾರ್ಯದಲ್ಲಿ ಪರಮನಾಗಿದ್ದ ಪಚೌರಿ ತನ್ನ ಪಂಚೆ ಎಲ್ಲೆಲ್ಲೋ ಬಿಚ್ಚಿದಾಗ, ಸಂಪಾದಕ ತರುಣ ತೇಜಪಾಲ ಲಿಫ್ಟಿನಲ್ಲಿ ಯಾರದೋ ತುಟಿಯೆಡೆಗೆ ತನ್ನ ಆಸೆಯ ನಾಲಿಗೆ ಚಾಚಿದಾಗ...#MeToo ಹೆಸರಿರಲಿಲ್ಲ;  ವಿಶ್ವದ ಹಲವೆಡೆ ಚರ್ಚುಗಳ ಶಿಲುಬೆಯಡಿ ಸಾವಿರಾರು ಬಾಲಕರ ಬಾಲ್ಯ ಅಪ್ಪಚ್ಚಿಯಾದಾಗಲೂ ಅಷ್ಟೇ; ಹತ್ತು-ಹನ್ನೆರಡರ ಹೆಣ್ಣುಮಕ್ಕಳನ್ನು ಅವರ ಅಪ್ಪ-ಅಜ್ಜರ ವಯಸ್ಸಿನ ಹೀರೋಗಳು ಮುತ್ತಿಕೊಂಡಾಗಲೂ ಅಷ್ಟೇ; ಇಂಗ್ಲೆಂಡಿನ ವೈದ್ಯನೊಬ್ಬ ತನ್ನನ್ನು ನಂಬಿ ಬಂದ ಪೇಶಂಟುಗಳ ಮೈಮೇಲೆಲ್ಲ ವಿಕೃತಿಯಲ್ಲಿ ಕೈಯಾಡಿಸಿದಾಗಲೂ ಅಷ್ಟೇ. ಆಗಾಗ ಅಲ್ಲಲ್ಲಿ ಕೆಲವು ಪ್ರಸಂಗಗಳು ಪಬ್ಲಿಕ್ ಆದರೂ, ಸಮಾಜ ಅದನ್ನು ಗಾಸಿಪ್ಪಿಗಷ್ಟೇ ಬಳಸಿಕೊಂಡಿತ್ತು. ಒಂದಿಷ್ಟು ನಟಿಯರ, 'ಮಹಾನಟಿ'ಯರ ದುರಂತ ಕಥೆಗಳು ಸಿನೆಮಾಗಳಾಗಿ ಮತ್ತೆ ಕಥೆಗಳಾದವು - ಸಿಲ್ಕ್ ಸ್ಮಿತಾ, ಸಾವಿತ್ರಿ.....ನಿಮ್ಮ ತಲೆಯಲ್ಲೂ ಒಂದಿಷ್ಟು ಹೆಸರು ಓಡುತ್ತಿರಬಹುದು. ಓಡಿಸಿ.


ಈ ಶತಮಾನದ ಆರಂಭದಲ್ಲಿ, ಸೋಶಿಯಲ್ ಮೀಡಿಯಾ ಬೆಳೆದಂತೆ ಹುಟ್ಟಿದ ಹೊಸ-ಹೊಸ ರೂಪಗಳಲ್ಲಿ #MeToo ಒಂದು. ಕೆಲಸದ ಜಾಗಗಳಲ್ಲಿ ಹೆಂಗಸರ ಮಾನಹಾನಿಯ ವಿರುದ್ಧ ಸಣ್ಣದಾಗಿ ಶುರುವಾದ #MeToo ದನಿಗೆ ಬಲ ಬಂದದ್ದು ಇತ್ತೀಚೆಗಷ್ಟೇ. ಹಾಲಿವುಡ್ಡಿನ ದೊಡ್ಡ ಪ್ರೊಡ್ಯೂಸರ್ Weinsteinನ 'ಕರಾಮತ್ತುಗಳು' ಒಂದಾದಮೇಲೊಂದು ಕಳೆದ ಎರಡು ವರ್ಷಗಳಲ್ಲಿ ಬಯಲಾಗುತ್ತಾ ಬಂದಂತೆ, ತಮಗಾದ ಅನ್ಯಾಯದ ಗೋಳಿನ ಕಥೆ ಹೇಳಿಕೊಳ್ಳುವರ ಸಂಖ್ಯೆಯೂ ಹೆಚ್ಚುತ್ತಾ ಬಂತು. ಕೆಲವು ಅಪರಾಧಿಗಳಿಗೆ ಶಿಕ್ಷೆಯಾದದ್ದೂ #MeTooಗೆ ಬಲ ಕೊಟ್ಟಿರಬಹುದು. ಹೀಗೆ ಅಮೆರಿಕೆಯಲ್ಲಿ ಬೆಳೆದ #MeToo, ಪ್ರಪಂಚದ ಹಲವೆಡೆ ಬಲಗೊಳ್ಳುತ್ತಿದೆ. ಸಿನಿಮಾದವರ ಜೊತೆಗೆ ಬೇರೆ-ಬೇರೆ ರಂಗದವರೂ ನಿಧಾನವಾಗಿ ದನಿ ಜೋಡಿಸುತ್ತಿದ್ದಾರೆ - ಒಂದೆರಡು ಕಂಪನಿಗಳ ದೊಡ್ಡ ತಲೆಗಳು ಇತ್ತೀಚಿಗೆ ಉರುಳಿವೆ.


ಎಲ್ಲೆಡೆಯಂತೆ, ಭಾರತದಲ್ಲೂ ಲೈಂಗಿಕ ಶೋಷಣೆ ಸರ್ವವ್ಯಾಪಿ. ಇದು ಮುಟ್ಟದ ರಂಗವಿಲ್ಲ - ಸರ್ಕಾರಿ, ಖಾಸಾಗಿ, ರಾಜಕೀಯ, ಕೋರ್ಟು, ಆಸ್ಪತ್ರೆ, ಶಾಲೆ, ಯೂನಿವರ್ಸಿಟಿ, ನಾಟಕ, ಸಿನೆಮಾ... ಮುಗಿಯದ ಪಟ್ಟಿ. ಸಿನೆಮಾದ ತನುಶ್ರೀ, ನಾನಾ ಪಾಟೇಕರನ ಹೆಸರು ಹೊರಗೆಳೆದು ಭಾರತಕ್ಕೆ ತಂದ  #MeTooವನ್ನ, ಮೀಡಿಯಾಗಳು ಕಿಟಕಿ ಮೇಲೆ ಕಿಟಕಿಯಿಟ್ಟು  ಖುಷಿಯಿಂದ ಬೆಳೆಸಿವೆ. ನಾ ಮುಂದು-ತಾ ಮುಂದು ಅಂತ #MeToo ಬೋರ್ಡು ಹಿಡಿದು ಕೂಗುತ್ತಿರುವ ಜನ ಆ 'ಕಿಟಕಿ'ಗಳನ್ನ ತುಂಬುತ್ತಿದ್ದಾರೆ. ಟಿವಿಯಾಚೆಗೂ ಹರಿದು, ಠಾಣೆ , ಕೋರ್ಟುಗಳಲ್ಲಿ ಡ್ರಾಮಾ ಮುಂದುವರೆದಿದೆ. ಎಲ್ಲಿಯವರಿಗೆ ಅನ್ನೋದನ್ನ ಕಾದು ನೋಡಬೇಕು.

ಟಿವಿ-ಸಿನೆಮಾದ ಡ್ರಾಮಾದಲ್ಲಿ, ಹೆಸರಿನಾಸೆಗೆ ಒಂದಿಷ್ಟು ಸುಳ್ಳು ಕಥೆಗಳೂ ಹುಟ್ಟಿರಬಹುದು, ಅಥವಾ ಮುಂದೆ ಹುಟ್ಟಬಹುದು. ಆ ಸುಳ್ಳುಗಳನ್ನ ತನ್ನಿಷ್ಟದಂತೆ 'ಅಧಿಕಾರಿ' ಸಮಾಜ  ಬಳಸಿಕೊಂಡು, ನಿಜ #MeToo ಸಂತ್ರಸ್ತರು ಹೊರಬಾರದಂತೆಯೂ, ಅವರಿಗೆ ನ್ಯಾಯ ಸಿಗದಂತೆಯೂ, ಮತ್ತೆ #MeToo ಮೂಮೆಂಟು ಕೊಟ್ಟಿರುವ ಸಾಮಾಜಿಕ ಬದಲಾವಣೆಯ ಅವಕಾಶವನ್ನ ಮಟ್ಟ ಹಾಕಲು ಹೊಂಚಿಸಬಹುದು. ಈಗಾಗಲೇ ವಾಟ್ಸಾಪ್ ಗಳಲ್ಲಿ ಗುಂಪಿನಿಂದ-ಗುಂಪಿಗೆ ಹಾರುತ್ತಿರುವ, #MeToo ಬಗ್ಗೆ ಕೇವಲವಾಗಿ ಮಾತಾಡುತ್ತ ಲೇವಡಿ ಮಾಡುತ್ತಿರುವ ಜೋಕುಗಳು, ಜೊತೆಯ ಕಮೆಂಟುಗಳು, ಚರ್ಚೆ ಎಲ್ಲೋ ಹಾದಿ ತಪ್ಪಿದೆ ಎನ್ನಿಸುವಂತೆ ಮಾಡಿವೆ. 'ಆಗ ಮೀಟು, ಮೀಟು ಎಂದವಳು ಈಗ #MeToo' ಎನ್ನುವ ಜೋಕುಗಳಲ್ಲಿ , ಸಿನೆಮಾದ ಹೊರಗೂ, ಹರೆಯ ಮುಟ್ಟದ ಮಕ್ಕಳಿಗೂ ಆಗುತ್ತಿರುವ ಅನ್ಯಾಯಗಳು ಕಳೆದುಹೋಗಿವೆ. ಅಮೆರಿಕೆಯ ಟ್ರಂಪ್, ಕವನ್ನ #MeToo ಹೊರತಾಗಿಯೂ ದೊಡ್ಡ-ದೊಡ್ಡ ಸ್ಥಾನ ಗಳಿಸಿರುವದೂ, ಉಳಿಸಿಕೊಂಡಿರುವದೂ #MeTooಬಗ್ಗೆ ಸ್ವಲ್ಪ ಉದಾಸೀನಕ್ಕೆ ಕಾರಣವಾಗಿದೆ.

ಚರ್ಚೆಯನ್ನು ಸರಿಹಾದಿಗೆ ತಂದೆಳೆಯುವ ಜವಾಬ್ದಾರಿ ದೊಡ್ಡ-ದೊಡ್ಡ ಮೀಡಿಯಾಗಳ ಮೇಲಿದೆ. ಹಾಗೆಯೇ, ರಾಜಕೀಯವನ್ನೆಲ್ಲ ಬದಿಗಿಟ್ಟು, ಈಗಾಗಲೇ ಇರುವ ಕಾನೂನುಗಳನ್ನ ಸರಿಯಾಗಿ ಆಚರಣೆಗೆ ತರುವ, ಆ ಕಾನೂನುಗಳ ಬಲವನ್ನ ಎಲ್ಲೆಡೆ ಪ್ರಚಾರಿಸುವ ಕಾರ್ಯಕ್ಕೆ ಸರ್ಕಾರಗಳು ಮುಂದಾಗಬೇಕಿದೆ. ಕೋರ್ಟುಗಳೂ, ಹೆಂಗಸರನ್ನು-ಮಕ್ಕಳನ್ನು ಬಲಾತ್ಕಾರದ ಭಯದಿಂದ ಬಾಯಿಮುಚ್ಚಿಸುವ, ಹೊರಗಿಡುವ ಜಾಗಗಳಲ್ಲಿ, ಅವರಿಗೆ ಸಮಾನವಾಕಾಶ ಕೊಡಿಸುವಂತ, ಅವರು ಮುಕ್ತವಾಗಿ ಪ್ರವೇಶಿಸುವಂತ ನಿಯಮಗಳನ್ನ ಹಾಕಬೇಕಿದೆ.

ಟಿವಿ-ಪೇಪರ್-ಸೋಶಿಯಲ್ ಮೀಡಿಯಾಗಳಲ್ಲಿ #MeToo #MeToo ತುಂಬಿ ತುಳುಕುತ್ತಿದೆ. ಬಿಹಾರದ ಅನಾಥಾಶ್ರಮಗಳ ಬಾಲಿಕೆಯರ ಗೋಳಿನ ಕಥೆಗಳು ಪಬ್ಲಿಕ್ ಮೆಮೋರಿಯಿಂದ ಆಗಲೇ ಮರೆಯಾಗಿವೆ. ಪಾದ್ರಿಯೊಬ್ಬ ತನ್ನ 'ಕೊಳಕು' ಕೆಲಸವನ್ನು ದೇವರ ಕೆಲಸವೆಂದು ನಾಚಿಕೆಯಿಲ್ಲದೆ ಬೊಬ್ಬಿಡುತ್ತಿದ್ದಾನೆ. ಪೊಲೀಸು ಲಾಕಪ್ಪುಗಳ ಗೋಡೆಗಳ ಮೌನದಲ್ಲಿ ಎಷ್ಟೋ ರಹಸ್ಯಗಳು ಮುಚ್ಚಿಹೋಗಿವೆ. ವಿಧಿಯಿಲ್ಲದೇ ಮನೆ-ಮನೆ ಕೆಲಸ ಮಾಡುವ ಮಕ್ಕಳು, ಯುವತಿಯರು ಬಾಯಿ ಮುಚ್ಚಿಕೊಂಡು ಕಸ ಗುಡಿಸುತ್ತಿದ್ದಾರೆ...... ಯಾವ #MeTooಗಳು ಅವರಿಗೆ ಪರಿಹಾರ ಕೊಡುವುದಿಲ್ಲ.

ನ್ಯೂಜಿಲ್ಯಾಂಡ್ ತನ್ನ ಕ್ರಿಕೆಟಿಗರಿಗೆ ಇತ್ತೀಚಿಗೆ, ಅನುಮತಿ (consent)ಬಗ್ಗೆ ವಿವರವಾಗಿ ತಿಳಿಸಿ, good decision making in sexual relationships ಎನ್ನುವ ಟಾಪಿಕ್ಕಿನಡಿ ಒಂದಿಷ್ಟು ನಿಯಮಗಳನ್ನ ನಿರೂಪಿಸಿದೆ. ಇದೊಂದು ಎಲ್ಲಾ ರಂಗಗಳಲ್ಲೂ ಅಳವಡಿಸಿಕೊಳ್ಳಬಹುದಾದಂತ ಉತ್ತಮ ಉದಾಹರಣೆ. ಸಮಸ್ಯೆ ಇದೆ ಎನ್ನುವದನ್ನ ಒಪ್ಪಿಕೊಂಡಾದ ಮೇಲಷ್ಟೇ ಸಮಾಧಾನ ಹುಡುಕಲು ಸಾಧ್ಯ, ಅಲ್ಲವೇ?

ಹಳೆಯ ಸೀತೆಯಂತೆ, ಆಧುನಿಕ 'ಸೀತೆ'ಯರು, ಮೋಹದಲ್ಲೋ, ಮೋಸದಲ್ಲೋ, ಮಾಯೆಯಲ್ಲೋ, ಮುಗ್ದತೆಯಲ್ಲೋ, ಭಯದಲ್ಲೋ, ಭಕ್ತಿಯಲ್ಲೋ, ಬಡತನದಲ್ಲೋ, ಅಥವಾ ಇನ್ಯಾವ ಕಾರಣಕ್ಕೋ ತಮ್ಮೊಳಗಿನ 'ರಾಮ'ನನ್ನು ದೂರ ಕಳಿಸಿ, ಬೇರಾರೋ ಬರೆದ ಎಚ್ಚರಿಕೆಯ 'ಲಕ್ಷ್ಮಣ ರೇಖೆ'ಯನ್ನ ಅರಿವಿನಿಂದಲೋ, ಅರಿವಿಲ್ಲದೆಯೋ ದಾಟಬಹುದು. ಆದರೆ, ತಂಗಿಗಾದ ಅವಮಾನದ ಸೇಡಿಗೆ ಸೀತೆಯನ್ನ ಅಪಹರಿಸಿದರೂ, ಆಕೆಯನ್ನು ಮುಟ್ಟದ, ಆಕೆಯೆಡೆಗೆ ಕಣ್ಣೆತ್ತಿ ನೋಡದ ಇಪ್ಪತ್ತು ಕಣ್ಣುಗಳ, ಅಹಂಕಾರಿ, ಮಹಾ ಬಲಶಾಲಿ ಅಂದಿನ ಲಂಕಾಸುರ  ತನ್ನ ಸುತ್ತ ತಾನೇ ಹಾಕಿಕೊಂಡ ಸಭ್ಯತೆಯ ರೇಖೆಯನ್ನ ಹೇಗೆ ದಾಟಲಿಲ್ಲವೋ ಹಾಗೆ ತಮ್ಮ ಸುತ್ತ 'ರಾವಣ ರೇಖೆ'ಯನ್ನ ಹಾಕಿಕೊಳ್ಳುವ ಜನರ ಸಮಾಜ ಬೆಳೆಯುವವರೆಗೆ #MeToo ಮುಂದುವರಿಯುವ  ಕಥೆ.

ನಮ್ಮ ಆಯಸ್ಸಿನ ನಾಳೆಯ ಆಚೆಯಲ್ಲಿ, ಕಂಪ್ಯೂಟರ್-ರೋಬೋಟುಗಳ ಹೊಸ ವಿಶ್ವದಲ್ಲಿ ಗಂಡು ಹೆಣ್ಣನ್ನು ಬಿಟ್ಟು ಅವುಗಳ 'ಒಡೆತನ' ಸಾಧಿಸಲು ಮೊದಲಾಗಬಹುದು; ಆ ಹೋರಾಟದಲ್ಲಿ ಹೆಣ್ಣು ಸಮಭಾಗಿಯಾಗದೆ ವಿಧಿಯಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಲೂ ಬಹುದು. ಅಥವಾ ಕೃತಕ ಗರ್ಭಚೀಲದಲ್ಲಿ, ಕೃತಕ ಅಂಡ, ಕೃತಕ ವೀರ್ಯ ಕೂಡಿಸಿ ಗಂಡು-ಹೆಣ್ಣು ಬೇಧವಿಲ್ಲದ ಅರ್ಧನಾರೀಶ್ವರ ಜೀವಗಳ ಸೃಷ್ಟಿಯಾಗಬಹುದು. ಅಲ್ಲಿಯವರೆಗೆ 'ರಾವಣ ರೇಖೆ' ಅವಶ್ಯವಾಗಿ ಬೇಕಿದೆ.


* 'ಸೀತೆ' = ಇಲ್ಲಿ ಇದು ಎಲ್ಲಾ ಲಿಂಗಗಳಿಗೂ (ಗಂಡು, ಹೆಣ್ಣು, ಮತ್ತುಳಿದವರು) ಅನ್ವಯಿಸುವ ನೀರ್ಲಿಂಗ  (ಫ್ಲೂಯಿಡ್ ಜೆಂಡರ್) ಪದ







Wednesday 25 July 2018

ಕನ್ನಡಿಯಾತ.... !

ಕನ್ನಡಿಯಾತ.... !



ನಿನ್ನೆ ಸಂಜೆ ವಾಟ್ಸಾಪ್ಪ್ನಲ್ಲಿ ಗೆಳೆಯನೊಬ್ಬ ಕಳಿಸಿದ Dale Wimbrow's famous The Man in the Glass (1934) ಕವನದ ಕನ್ನಡೀಕರಣ:

ಕನ್ನಡಿಯಾತ.... !

ನೀ ಸುರಿಸಿದ ಬೆವರೆಲ್ಲ ಸೇರಿ
ಬಯಕೆ ಬಟ್ಟಲು ತುಂಬಿ ಸೋರಿ
ತಲೆಯ ಮೇಲೇರೆ ಜಂಭದ ಗರಿ
ಕನ್ನಡಿಯಲಿ ಇಣುಕಿ ಒಂದು ಬಾರಿ 
ಕೇಳವನ ನುಡಿಅದು ನಿನ್ನ ಸಿರಿ!

ಹೆತ್ತಮ್ಮಅಪ್ಪಕೈ ಹಿಡಿದ ನಾರಿ
ಅಳೆಯುವ ದೂರವಲ್ಲ ಬದುಕಿನ ಗುರಿ
ಕನ್ನಡಿಯೊಳಗಿಂದ ಕಣು್ಣ ತೂರಿ
ಅವನು ತೋರಿದ್ದೇ ನಿನ್ನ  ಸರಿ ದಾರಿ. 

ಬೇಕಿಲ್ಲ ಉಳಿದೋರ ಉಸಾಬರಿ
ಅವನಿರಲು ನಿನ್ನುಸಿರಿನಲಿ ಸೇರಿ
ಕಡುಕಷ್ಟದಾಪತ್ತುಗಳ ದಾಟುವೆ ಹಾರಿ
ಜೊತೆಯಿರೆ ಕನ್ನಡಿಯಾತನ ಸ್ನೇಹಸಿರಿ!

ಜಗಕೆಲ್ಲ ಊದುತ್ತ ಸುಳಿ್ಳನ ತುತೂ್ತರಿ
ಹತಿ್ತ ಕುಳಿತರೂ ಶಹಬಾ್ಬಸ್ಗಿರಿ
ಕಡೆಗುಳಿವ ಗರಿ ಕಣೀ್ಣರುಎದೆಯುರಿ
ಕಣ್ಕಟ್ಟಿ ನಿಲ್ಲೆ ನೀ ಕನ್ನಡಿಯಾತಗೆ ಬೆನ್ನುತೋರಿ!



ಮುರಳಿ ಹತ್ವಾರ್ (ಜುಲೈ ೨೦೧೮)

(ಪೀಟರ್ ಡೇಲ್ ವಿಂಬ್ರೌ ೧೯೩೪ರಲ್ಲಿ ಬರೆದ The Man in the Glass ಕವನದ ಭಾವಾಂತರ)




When you get what you want in your struggle for self
And the world makes you king for a day
Just go to the mirror and look at yourself
And see what that man has to say.

For it isn’t your father, or mother, or wife 
Whose judgment upon you must pass
The fellow whose verdict counts most in your life
Is the one staring back from the glass.

He’s the fellow to please – never mind all the rest
For he’s with you, clear to the end
And you’ve passed your most difficult, dangerous test
If the man in the glass is your friend.

You may fool the whole world down the pathway of years
And get pats on the back as you pass
But your final reward will be heartache and tears
If you’ve cheated the man in the glass. 

Monday 2 July 2018

ಮಗಳಿಗೆ - ೨

ಮಗಳಿಗೆ - ೨:



ಮಲಗು ಮಲಗು
ಮುದ್ದು ಮಗುವೆ
ನಮ್ಮ ಮನೆಯ
ಚೆಂದದೊಡವೆ
ನಿನ್ನ ನಗುವು
ನಮ್ಮ ಸಿರಿಯು
ನಿನ್ನ ನಲಿವು
ನವಿಲು ಗರಿಯು!

ಮಲಗು...ಮಲಗು...


ಹೊಳೆಹೊಳೆವ ರವಿಯು
ದಣಿದಣಿದು ಹೊರಳಿ
ತಣಿತಣಿವ ನೆರಳು
ಇಳೆಗಿಳಿದು ಉರುಳಿ
ಕುಣಿಕುಣಿವ ತಾರೆ
ಶಶಿಯೊಡನೆ ಅರಳಿ
ಕಳೆಕಳೆಯೆ ಇರುಳು
ಕನಸಿನಲಿ ಮರಳಿ!

ಮಲಗು...ಮಲಗು...


ಇರುಳೊಡತಿ ನಿನ್ನ
ಕರೆಕರೆದು ಚಿನ್ನ
ನಗೆಯುಡುಗೆ ತೊಡಿಸಿ
ಕನಸುಗಳ ಹೊದಿಸಿ
ಇಹಪರವ ಮರೆಸಿ
ಬೆಳೆಸುತಲಿ ಹರಸಿ
ಸರಿಯುವಳು ತೆರೆಗೆ
ಉಷೆ ಹರಿಯೆ ಧರೆಗೆ!

ಮಲಗು...ಮಲಗು...


ಹಳೆತನವ ಹೊಳೆಸೆ
ಎಳೆತನದ ಸಿರಿಯು
ಕನಸುಗಳ ಇರುಳು
ಗೆಲುವಿನೊಳ ದನಿಯು
ಗೆಳೆತನವ ಬೆಳೆಸೆ
ಒಳಿತನದ ಗರಿಯು
ಬೆಳಕುಗಳ ಹಗಲು
ಒಲವಿನೊಳ ಸವಿಯು!


ಮಲಗು...ಮಲಗು...


(೨-೭-೨೦೧೮)










Saturday 14 October 2017

ಮಗಳಿಗೆ-1

ಮುದ್ದು ಮಗಳಿಗೆ,

ದಿನ ತುಂಬಿ ಒಂದಾಗಿತ್ತು
ನಿನ್ನಮ್ಮನಿಗೆ ತಲೆಸುತ್ತು!
ಬರುವ ಅವಸರ ನಿನಗೆ, ಕಳಿಸುವ 
ಆತುರ ಅವಳಿಗಿರಲಿಲ್ಲ!
ಬಗೆದು ಬರಮಾಡಿಕೊಂಡದ್ದಾಯಿತು.
ನಿನ್ನಳುವಿನ ನಗೆ, ನಿನ್ನಮ್ಮನ ನಗೆಯಳು
ನನ್ನ ಭಾವದ ಭಾಷೆಗೆ ನಿಲುಕದ್ದು; ಅರ್ಥ
ಹುಡುಕುವ ಧೈರ್ಯ ನನಗಿಲ್ಲ!

ಕಿಟಕಿಯಾಚೆ, ತೆಮ್ಸ್ ತಣ್ಣಗೆ ಹರಿಯುತಿತ್ತು.
ದಡದಾಚೆಯ ಪಾರ್ಲಿಮೆಂಟಿನೊಳಗೆ ಬ್ರೆಕ್ಸಿಟ್ಟಿನ
ಬೆಂಕಿ ಆರಿಸಲು ನೀರು ಹುಡುಕುತ್ತಿರಬೇಕು
ಮೇ ಮತ್ತವಳ ಬಿಳಿ ಹಿಂಡು! ಸೂರ್ಯ ಮುಳುಗುತ್ತಿದ್ದ
ಪಾರ್ಲಿಮೆಂಟಿನ ಹಿಂದೆ, ಎಂದಿನಂತೆ.
ರಿಪೇರಿಯ ಮೌನದಲಿತ್ತು ಬಿಗ್ ಬೆನ್ ಘಂಟೆ.
ತನ್ನ ಏರಿಳಿತದಾಟಕ್ಕೆ ತೆಮ್ಸ್ ನೆಚ್ಚುವುದು
ಸೂರ್ಯ-ಚಂದ್ರರ ಮಾತ್ರ!

ನಿನ್ನಮ್ಮ-ಅಪ್ಪನ ತವರಿನಲ್ಲಿ, ಚಹಾ ಮಾರಿ ಬೆಳೆದು
ದೇಶದ ಚುಕ್ಕಾಣಿ ಹಿಡಿದ ಜನನಾಯಕನ 
ಹುಟ್ಟು ದಿನದ ಸಂಭ್ರಮ! ನರ್ಮದೆಯ ಹರಿವು
ಬದಲಿಸುವ ಅಡ್ಡಗೋಡೆಯ ಮೇಲೆ ದೀಪ 
ಬೆಳಗಿದ್ದು ಅವನಾಚರಣೆ. ಗೋಡೆಯ ಮೇಲೆ
ಅವನ ನಾಯಕನ ನೂರಾಳೆತ್ತರದ ಕಬ್ಬಿಣದ 
ಗೊಂಬೆಯ ನಿಲ್ಲಿಸುವ ಆಸೆ ಅವನಿಗೆ.
ನರ್ಮದೆ ಕಿಲಕಿಲನೆ ನಕ್ಕಿರಬೇಕು!

ನಿನ್ನ ನಾಳಿನ ನೆಲೆ ಎಲ್ಲೋ? ಬಸವಳಿದ 
ಧರೆಯೋ? ಬೆಳದಿಂಗಳ ದೊರೆಯೋ?
ಮಂಗಳನ ಅಂಗಳದ ಪೊರೆಯೋ?
ನಿನ್ನ ಹರಿವಿನ ಲಹರಿ, ಹಾರುವ ದಿಕ್ಕು ಬದಲಿಸುವ 
ಹುಂಬತನ ನಮಗಿಲ್ಲ. ದಾರಿಯ ಒಪ್ಪ
ಗೊಳಿಸಿ, ದಡವ ಕಟ್ಟುತ ಸಂಕಲ್ಪಿಸವುದಿಷ್ಟೇ:
ನಡೆಸುವೆವು ಕೈ ಹಿಡಿದು ನೀ ನಡೆವೆಡೆಗೆ
ನಿನ್ನರಿವಿನ ಗುರಿಯ ಸಾಗರ ನಿನಗೆ ಸಿಗುವರೆಗೆ.

ಮುರಳಿ ಹತ್ವಾರ್
14.10.2017


Friday 15 September 2017



ಭಾದ್ರಪದದ ಕರಿ ಮೋಡ 

ಹನಿಸುತ ಮಣ್ಣಿನ
ಕರಣವ ತಣಿಸಿ
ಸಂಜೆಯ ಹೊನ್ನಿನ
ಕಿರಣವ ಮಣಿಸಿ
ಕಾಮನ ಬಿಲ್ಲಿನ
ತೋರಣ ಹೆಣಿಸಿ
ಬೀಸುವ ತಂಗಾಳಿಯ ಕೂಡ
ಬೀಗುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಇಂದಿಗೆ ಇರುವಿನ
ನಲಿವನು ತಿಳಿಸಿ
ನಿನ್ನೆಯ ನೆನಪಿನ
ಕಲೆಯನು ಅಳಿಸಿ
ನಾಳೆಗೆ ಒಳಿತಿನ
ಬಲವನು ಉಳಿಸಿ
ಹರಿಯುವ ಹೊನ್ನೀರಿನ ಕೂಡ
ಮೆರೆಯುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಬಣ್ಣದ ಮಳೆಯಲಿ
ನಯನವ ತೊಳೆಸಿ
ರಂಗಿನ ಸೊಬಗಲಿ
ಒಲವನು ಹೊಳೆಸಿ
ಅನುಭವದರಿವಲಿ
ಬದುಕನು ಬೆಳೆಸಿ
ಮೆರೆಸುತ ಅವನಾಟದ ಗೂಡ
ಸರಿಯುತ ಸಾಗಿದೆ ನೋಡ
ಭಾದ್ರಪದದ ಕರಿ ಮೋಡ!

ಮುರಳಿ ಹತ್ವಾರ
೧೪. ೦೯. ೨೦೧೭

ಚಿತ್ರ: ತೆಮ್ಸ್ ನದಿಯ ಮೇಲಿನ ಕಾಮನ ಬಿಲ್ಲು







Sunday 13 March 2016

ಹಾರು ಮನವೇ

ಹಾರು ಮನವೇ ಹಾರು
ನಿಲುಕದಷ್ಟು ಎತ್ತರ
ಕಾಣದಷ್ಟು ದೂರ...

ರೂಪಿಸುತ ನಾಳೆಗಳನು,
ಮೂಡಿಸಿ ಹೊಸ ಅಕ್ಷರಗಳ
ನಿನ್ನೆ ಅಳಿಸಿದ ಹಾಳೆಗಳಲಿ.

ಹಾರುವೆ ನೀ ತೋರಿದೆಡೆಗೆ
ನೆಲವೆಲ್ಲೆಂಬ ಚಿಂತಿಲ್ಲ,
ನಲಿವಿರಲು ಇಂದಿಗೆ!

ಹಾರು ಮನವೇ ಹಾರು
ನಿಲುಕದಷ್ಟು ಎತ್ತರ
ಕಾಣದಷ್ಟು ದೂರ...





Sunday 14 February 2016

ವಿಲಿಯಂ ವರ್ಡ್ಸವರ್ತ (William Wordsworth) (1770-1850) ಇಂಗ್ಲೆಂಡಿನ ಬಹು ಪ್ರಸಿದ್ಧ ಕವಿ. ಅವನ ಡ್ಯಾಫೊಡಿಲ್ ಕವಿತೆ ಹೆಚ್ಚಿನವರ ಮನದಲ್ಲಿ ಇ೦ದಿಗೂ ಅವನ ನೆನಪನ್ನ ಉಳಿಸಿರುವ, ಬಹು ಜನರು ಮೆಚ್ಚಿದ ಕವಿತೆ. ಈ ಕವಿತೆಯ ಕನ್ನಡ ಅನುವಾದದ ಒಂದು ಪ್ರಯತ್ನ. ಜೊತೆಗೆ ಅವನ ಮನೆಯ ಮತ್ತು ಅವನ ಈ ಕವಿತೆಗೆ ಸ್ಪೂರಿ್ತಯಾದ ಉಲ್ಸವಾಟರ್ (uls water lake) ಕೆರೆಯ ಚಿತ್ರಗಳು ನಿಮಗಾಗಿ:

ಹಳದೀ ಹೂಗಳು........

ನಡೆದಿದ್ದೆ ನಾ ಒಂಟಿಯಾಗಿ, ಕಣಿವೆ-ಗುಡ್ಡಗಳ 
ಮೇಲೆ ಎತ್ತರದಲಿ ತೇಲುವ ಮೋಡವೊಂದರಂತೆ.
ಕಂಡೆನೊಮ್ಮೆಲೆ ಬಹುದೊಡ್ಡ, ಹೊಂಬಣ್ಣದ 
ಹಳದಿ-ಹೂಗಳ ಗುಂಪೊಂದ;
ಕೆರೆಯ ತಡಿಯಲಿ, ಮರಗಳಡಿಯಲಿ
ಪಟಪಟಿಸಿ ಕುಣಿಯುತಿದ್ದವವು ತಂಗಾಳಿಯಲಿ.

ಮಿಂಚುತ, ಹೊಳೆಯುವ ಆಕಾಶ ಗಂಗೆಯ
ನಿರಂತರ ನಕ್ಷತ್ರಗಳಂತೆ, ಹರಡಿದ್ದವವು
ಎಂದೂ ಮುಗಿಯದ ಸಾಲಿನಂತೆ, ಆ ದಡದಂಚಿನಲಿ:
ಹತ್ತು ಸಾವಿರವ ಕಂಡೆ ಒಂದೇ ನೋಟದಲಿ,
ನರ್ತಿಸುತ್ತಿದ್ದವವು ನಲಿವಿನಲಿ ತಲೆದೂಗಿ.

ಪಕ್ಕದ ನೀರ ಅಲೆಗಳೂ ಕುಣಿಯುತಿದ್ದವು; ಆದರೆ
ಹೂಗಳು ಹಿಂದಿಕ್ಕಿದ್ದವು ಮಿಂಚುವಲೆಗಳ ಹರ್ಷದಿಂದಲಿ:-
ಕವಿಯೊಬ್ಬಗೆ ಸಂತಸವಲ್ಲದೆ ಮತ್ತೇನು
ಉಲ್ಲಸಿತರ ಇಂತಹ ಸಂಗದಲ್ಲಿ:
ನೋಡಿದೆ---ನೋಡುತ್ತಲೇ ಇದ್ದೆ---ಒಂದಿಷ್ಟೂ ಯೋಚಿಸದೆ
ಏನು ಸಿರಿಯ ತಂದಿಹುದು ಹೂಗಳೀ ಆಟ ನನಗೆಂದು:

ಏಕೆಂದರೆ ಮಂಚದ ಮೇಲೆ ಸುಮ್ಮನೆಯೋ,
ಮನನ ಮಾಡುತ್ತಲೋ ಮಲಗಿದಾಗಲೆಲ್ಲ
ನನ್ನೊಳಗಣ್ಣ ಹೊಳಪಿಸುವವೀ ಹೂಗಳು
ಅದುವೇ ನನಗೆ ಏಕಾಂತದ ಪರಮಾನಂದ,
ಮತ್ತೆ ನನ್ನ ಹೃದಯ ಹರುಷದಿಂದ ತುಂಬಿ,
ಕುಣಿಯುವುದು ಹಳದೀ ಹೂಗಳೊಟ್ಟಿಗೆ.


(ವಿಲಿಯಂ ವರ್ಡ್ಸವರ್ತ, ೧೮೧೫)
ಅನುವಾದ: ಮುರಳಿ ಹತ್ವಾರ, ೨೦೧೬)


ವಿಲಿಯಂ ವರ್ಡ್ಸವರ್ತನ ಮನೆ, ಗ್ರಾಸಮೀರ್, ಇಂಗ್ಲೆಂಡ್(photo: murali hathwar)

ಉಲ್ಸ್ ವಾಟರ್ ಕೆರೆ(photo: murali hathwar)

Saturday 31 January 2015

ಬದುಕು..!

ನಿನ್ನೆಯ ಬದುಕು,
ನೆನಪಿನ ಪಾಕ
ಇಂದಿನ ಬದುಕು,
ನಲಿವಿನ ನಾಕ
ನಾಳಿನ ಬದುಕು,
ನಿಲುಕದ ಲೋಕ!

ನಲಿವು ಇಂದಷ್ಟೇ. ಬದುಕು.


Friday 3 July 2009

ಜಾಕ್ಸನ್ನನ ಕಾಲದಲ್ಲೊ೦ದು ಪುರ೦ದರ ನಮನ

ಜಾಕ್ಸನ್ನನ ಕಾಲದಲ್ಲೊ೦ದು ಪುರ೦ದರ ನಮನ.....

ಲ೦ಡನ್ನಿನ ಪೂರ್ವ ಭಾಗದಲ್ಲೊ೦ದು ಪುಟ್ಟ ಮನೆ. ಒ೦ದಕ್ಕೊ೦ದು ಅ೦ಟಿಕೊ೦ಡಿರುವ ನಾಲ್ಕು ಮನೆಗಳ ಒ೦ದು ಮೂಲೆಯ ಮನೆಯಲ್ಲಿ ನನ್ನ ವಾಸ. ಭಾನುವಾರಗಳ೦ದು ನಾಲಕ್ಕೂ ಮನೆಯವರಿಗೂ ತಮ್ಮಿಷ್ಟದ ಸ೦ಗೀತವನ್ನ ಪಕ್ಕದ ಮನೆಗಳವರಿಗೆ ಕೇಳಿಸುವ ಹುಚ್ಚು. ಬಾಕಿ ಭಾನುವಾರಗಳ೦ದು ಒ೦ದೊ೦ದು ಮನೆಯವರದ್ದೂ ಒ೦ದೊ೦ದು ಸ೦ಗೀತ-ಸುಲಭದಲ್ಲಿ ಹೇಳುವದಾದರೆ, Rock, Pop, Reggae ಮತ್ತು ಕನ್ನಡ ಗೀತೆಗಳು ಎನ್ನಬಹುದು. ಆದರೆ, ಈ ಭಾನುವಾರ ಎಲ್ಲ ಮನೆಯವರದ್ದೂ ಒ೦ದೇ ಹಾಡು! ಶೋಕವೋ, ಸ೦ತಾಪವೋ, ಕುತೂಹಲವೋ ಕಾರಣ ಏನೇ ಆದರೂ ಜೋರಾಗಿ ಕೇಳುತ್ತಿದ್ದದ್ದು ಮೈಕೆಲ್ ಜಾಕ್ಸನ್ನನ ಸ೦ಗೀತ.

“ನೀನು ತ್ರಿಲ್ಲರ್ ಕೇಳಿದ್ದೀಯಾ? ಅರ್ತ್, ಬ್ಲ್ಯಾಕ್ ಅ೦ಡ್ ವೈಟ್ ಗೊತ್ತಾ? ಇವತ್ತಾದ್ರೂ ಕೇಳು” ಅ೦ತ ನನ್ನ ignoranceಗೆ ಸ್ವಲ್ಪ ಕೋಪದಲ್ಲೇ ಮರುಗುತ್ತ, ಮೂವತ್ತಕ್ಕೇ ಮುಪ್ಪನಪ್ಪಿದವನೇನೋ ಎ೦ಬ೦ತೆ ನನ್ನನ್ನು ಕೆಣಕಿ youtubeನಲ್ಲಿ ಕೇಳಿಸುತ್ತಿದ್ದ ನನ್ನಿಬ್ಬರು ಸ್ಹೇಹಿತರ ‘ಮಾರ್ಗದರ್ಶನ’ದಲ್ಲಿ ಜಾಕ್ಸನ್ನನ ಸುಮಾರು ಹಾಡುಗಳನ್ನ ನೋಡಿದೆ. ಕಪ್ಪಿನಿ೦ದ ಬಿಳುಪಿನೆಡೆಗಿನ ಅವನ ಪಯಣ, ಭೂತಗಳೊಟ್ಟಿಗಿನ ಹಾಡಿನಿ೦ದ (ತ್ರಿಲ್ಲರ್) ಹಿಡಿದು ತಾನೇ ‘ಭೂತ’ರೂಪನಾದ ಅವನ ಹುಚ್ಚುತನ, ನಡು-ನಡುವೆ ಭೂಮಿ, ಬಡತನ, ಕದನ, ಬ೦ಧನಗಳ ಬಗ್ಗೆ ಹಾಡಿ-ಕುಣಿದು, ಆ ತಾಳಕ್ಕೆ ಪ್ರಪ೦ಚವನ್ನೇ ಕುಣಿಸಿದ್ದ ಅವನ ಕಥೆಯೆಲ್ಲವನ್ನೂ ನೋಡಿದೆ. ಕೇಳಿದ ಸಾಹಿತ್ಯ ನಮಗೆ ಅರ್ಥವಾಗಿದ್ದು ಅಷ್ಟಕ್ಕಷ್ಟೇ. ಅರ್ಥವಾದಷ್ಟನ್ನು ವಿಮರ್ಶಿಸುತ್ತಾ ಹರಟುತ್ತಾ ಕುಳಿತ ನಮಗೆ ಹೊಟ್ಟೆಯೊ೦ದಿರದಿದ್ದರೆ ಸಮಯ ಹೋಗಿದ್ದೇ ತಿಳಿಯುತ್ತಿರಲಿಲ್ಲ.

ಲ೦ಡನ್ನಿನ ಹೊರಗಿನವರಿಗೆ ಶರವಣ ಭವನ, ವಸ೦ತ ಭವನ, ಚೆನೈ ದೋಸಾಗಳು ಯಾತ್ರಾ ಸ್ಥಳಗಳಾದರೆ, ನನಗೆ ಅವೆಲ್ಲ ಆಪತ್ತಿನ ಮಿತ್ರ! ನಮ್ಮಲ್ಲಿ ಚರ್ಚಯಾದದ್ದು ಯಾವ ಹೋಟೇಲಿಗೆ ಹೋಗಬಹುದು ಎನ್ನುವ ತೀರ್ಮಾನಕ್ಕೆ ಮಾತ್ರ. ದೋಸೆ-ವಡೆಗಳು ಹೊಟ್ಟೆ ತು೦ಬಿದ ಮೇಲೆ, ಉಳಿದರ್ಧ ಭಾನುವಾರ ಹೇಗೆ ಕಳೆಯುವದು ಎ೦ಬ ಆಲೋಚನೆಗೆ ದಾರಿ ತೋರಿಸಿದ್ದು ಕನ್ನಡ ಬಳಗದ ಈ-ಮೇಲು. ಅದು, ಅ೦ದು ಮಧ್ಯಾಹ್ನ ೬೦ ಮೈಲಿ ದೂರದ Basingstokeನಲ್ಲಿ ನಡೆಯಲಿದ್ದ ಪುರ೦ದರ ನಮನ ಮತ್ತು ‘ಮುಖಪುಟ’ ಚಲನಚಿತ್ರದ ಪ್ರದರ್ಶನ. ಮನೆಯ ಹತ್ತಿರ ನೆಲೆಸಿರುವ ಇನ್ನೊಬ್ಬ ಸ್ಹೇಹಿತನಿಗೂ ಫೋನಾಯಿಸಿ, ಅವಸರದಲ್ಲಿ ಅವನನ್ನು ರೆಡಿಮಾಡಿಸಿಕೊ೦ಡು ಹೊರಟೆವು.

ಸುತ್ತು ಬಳಸಿನ ಲ೦ಡನ್ನಿನ ರಸ್ತೆಗಳಲ್ಲಿ, ಅಪರೂಪದ ‘ಬಳ್ಳಾರಿ ಬಿಸಿಲಲ್ಲಿ’ ತೆವಳುತ್ತಿದ್ದ ನಮಗೆ, ಸ೦ಗೀತ ಕಲಿತಿದ್ದ ಸ್ಹೇಹಿತ ಪುರ೦ದರ ದಾಸರ ‘ಚಿ೦ತ್ಯಾಕೆ ಮಾಡುತ್ತಿದ್ದಿ........., ಕೇಶವ ಮಾಧವ.......’ ಕೀರ್ತನೆಗಳನ್ನ ಹಾಡಿ ದಾರಿ ಕರಗಿಸುತ್ತಿದ್ದ.

ಈಸ ಬೇಕು ಇದ್ದು ಜೈಸಬೇಕು.....ಹೇಸಿಗೆ ಸ೦ಸಾರದಲ್ಲಿ.....ಎ೦ದು ಪುರ೦ದರ ದಾಸರು ಬರೆದು ೫೦೦ ವರ್ಷದ ಮೇಲಾಯಿತು. ಸ೦ಸಾರದ ಸಿರಿತನಗಳೆಲ್ಲವನ್ನು ತಾವೇ ತ್ಯಜಿಸಿ, ಸಾಮಾಜಿಕ ಕಳಕಳಿಯ ಜೊತೆಗೆ ಭಕ್ತಿ ಭಾವವ ಬಿ೦ಬಿಸುವ ಸಾಲುಗಳನ್ನ ಸ೦ಗೀತದ ಲಯ ಕೊಟ್ಟು, ಶಿಸ್ತಿನ ಕಟ್ಟು ಪಾಡಿನಲಿ ಕಟ್ಟಿಟ್ಟ ಅವರು ಮೈಕೆಲ್ ಜಾಕ್ಸನ್ನನ ಕಾಲದಲ್ಲೂ ಜೀವ೦ತ.

ಸ೦ಗೀತ-ನೃತ್ಯಗಳನ್ನು ಎಲ್ಲ ಕಟ್ಟು ಪಾಡಿನಿ೦ದ ಹೊರತ೦ದ ಜಾಕ್ಸನ್ನ ಹಣದ ಹುಚ್ಚಿನಲ್ಲಿ ಸ್ವೇಚ್ಛೆಯಿ೦ದ ಮೆರೆದು, ಒ೦ದಿಷ್ಟು ದಿನ ಎಲ್ಲವನ್ನೂ ಕಳೆದುಕೊ೦ಡು ತಿರುಕನ೦ತೆ ಅಲೆದ. ಮಾತ್ರೆ-ಇ೦ಜೆಕ್ಷನ್ ಗಳ ನೋವು-ನಲಿವಿನ ಮಾಯಾಲೋಕದಲ್ಲೇ ವಿಹರಿಸುತ್ತ, ಸಾಯುವ ಮೊದಲೊಮ್ಮೆ ಕುಣಿಯುತ್ತೇನೆ ಎ೦ದವ ಕುಣಿಯುವ ಮೊದಲೇ ಸತ್ತ. ಇನ್ನೂ ಐನೂರು ವರ್ಷಗಳ ನ೦ತರ ಅವನಿಷ್ಟೇ ನೆನಪಿನಲ್ಲಿ ಉಳಿಯುವನೇ?....ಮುಗಿಯದ ಆ ಆಲೋಚನೆಗಳ ಸರಪಳಿಯಲ್ಲಿ Basingstokeನ ದಾರಿ ಸವೆದಿದ್ದೇ ತಿಳಿಯಲಿಲ್ಲ.

ವಿದುಷಿ ಮನೋರಮಾ ಪ್ರಸಾದರ ಸ೦ಗೀತದ ಅಲೆ, ಸ್ಹೇಹಿತೆ ಜ್ಯೋತ್ಸಾ ಶ್ರೀಕಾ೦ತರ ವಯೋಲಿನ್ನಿನ ಮೆರುಗು ಬೇರಾವ ಆಲೋಚನೆಗೂ ಅವಕಾಶ ಕೊಡಲಿಲ್ಲ.

ಪುರ೦ದರ ದಾಸರು ಕೀರ್ತನೆಯೊ೦ದರಲ್ಲಿ ಬರೆದ೦ತೆ, ‘.....ಅ೦ದಿಗೆ ಇದ್ದ ಈಶ ಇ೦ದಿಗೂ ಇದ್ದಾನೆ...’ ಸ೦ಗೀತವೇ ಈಶನೆ೦ದು ನ೦ಬಿ ನಮಿಸುವ, ಪುರ೦ದರ-ಜಾಕ್ಸನ್ನರಿಬ್ಬರನ್ನೂ ಒ೦ದೇ ಆಸಕ್ತಿಯಿ೦ದ ಆಲಿಸುವ ಜನರಿರುವವರೆಗೆ, ಬಹುಷ, ಸ೦ಗೀತ ಜೀವ೦ತವಾಗಿರುತ್ತೆ. ಅವರಿಬ್ಬರಿಗೂ ನಮನ.

Sunday 31 May 2009

ಚಿಂತ್ಯಾಕೆ ಮಾಡುತ್ತೀಯ....ಪುರಂದರ ದಾಸರ ಕೀರ್ತನೆ

ಚಿ೦ತ್ಯಾಕೆ........ ರಚನೆ: ಪುರ೦ದರ ದಾಸರು

ಚಿ೦ತ್ಯಾಕ ಮಾಡುತ್ತಿದ್ದಿ ಚಿನ್ಮಯನಿದ್ದಾನೆ
ಚಿ೦ತಾರತ್ನನೆ೦ಬೋ ಅನ೦ತನಿದ್ದಾನೆ
ಪ್ರಾಣಿ ಅನ೦ತನಿದ್ದಾನೆ

ಎಳ್ಳು ಮೊನೆಯ ಮುಳ್ಳು ಕೊನೆಯ
ಪೊಳ್ಳು ಬಿಡದೆ ಓಳಗೆ ಹೊರಗೆ
ಎಲ್ಲ ಠಾವಿನಲ್ಲಿ ಲಕ್ಷ್ಮಿ ವಲ್ಲಭನಿದ್ದಾನೆ
ಗೋಪ್ತ ತ್ರಿಜಗ ವ್ಯಾಪ್ತ ಭಜಕರ ಆಪ್ತನೆನಿಸಿ
ಸ್ತ೦ಭದಲ್ಲಿ ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತನಿದ್ದಾನೆ

ಹಿ೦ದೆ ನಿನ್ನ ಸಲಹಿದರ್ಯಾರೊ
ಮು೦ದೆ ನಿನ್ನ ಕೊಲ್ಲುವರ್ಯಾರೊ
ಅ೦ದಿಗಿ೦ದಿಗೆ೦ದಿಗು ಗೋವಿ೦ದನಿದ್ದಾನೆ
ಅ೦ದಿಗೆ ಇದ್ದ ಈಶ ಇ೦ದಿಗೂ ಇದ್ದಾನೆ
ಅ೦ದಿಗೆ ಇ೦ದಿಗೆ ಇ೦ದಿಗೆ ಅ೦ದಿಗೆ ಎ೦ದಿಗೂ ಇದ್ದಾನೆ

ಮುಕ್ಕಣ್ಣ ದೇವರ್ಗಳಿಗೆ ಸಿಕ್ಕಿದ್ದ ಸೆರೆಯನ್ನು ಬಿಡಿಸಿ
ಚಿಕ್ಕವರಿಗೆ ಅಚಲ ಪದವಿಯ ದಕ್ಕಿಸಿದ್ದಾನೆ
ನಾನು ನನ್ನದು ಎ೦ಬುದು ಬಿಟ್ಟು ಹೀನ ವಿಷಯ೦ಗಳನು
ಜರಿದು ಜ್ಞಾನ ಗಮ್ಯ ಕಾಯೋ ಎನಲು ಪೂರ್ಣನಿದ್ದಾನೆ

ಸುತ್ತಲಿ ಬ೦ದ ದುರಿತಗಳೆಲ್ಲ ಕತ್ತರಿಸಿ ಕಡಿದು
ಹಾಕುವ ಹೆತ್ತ ತಾಯಿ ತ೦ದೆ ತವರು ಹತ್ತಿರವಿದ್ದಾನೆ
ಬಲ್ಲಿದ ಭಜಕರ ಹೃದಯದಲ್ಲಿ ನಿ೦ತು ಪುರ೦ದರ ವಿಠಲ
ಸೊಲ್ಲು ಸೊಲ್ಲಿಗವರ ಬಯಕೆ ಸಲ್ಲಿಸುತಿದ್ದಾನೆ

ಈ ಕೀರ್ತನೆಯನ್ನು ಇಲ್ಲಿ ಕೇಳಿ: ಹಾಡಿರುವವರು: ಶ್ರೀಧರ್

Saturday 14 February 2009

ಕಪ್ಪು-ಬಿಳುಪು



ಕಪ್ಪು-ಬಿಳುಪು


ಚಕ್ರ ತಿರುಗುತಿತ್ತು.
ಹತ್ತಾರು ಬುಟ್ಟಿ, ತು೦ಬೆಲ್ಲಾ ಜನ
ತಲೆಗಿಷ್ಟು ಹಿಡಿ ಪೌ೦ಡು
ಮೇಲೇರಿದಷ್ಟು ದೂರದ ನೋಟ
ಎತ್ತರದ ವಾಸ ಒ೦ದಿಷ್ಟು ಕ್ಷಣ
ಅಮಲೇರುವ ಮುನ್ನ ಭೂ-ಸ್ಪರ್ಶ
ಕೆಳಗಿನವನೀಗ ಮೇಲೇರಿದ ರಾಜ
ನಿಲ್ಲದು ಚಕ್ರದ ತಿರುಗಾಟ!

ಕಾಲು ನಡೆಯುತಿತ್ತು.
ಹತ್ತಾರು ಹೊಟ್ಟೆ, ಮೈತು೦ಬ ಬಣ್ಣ
ದೊ೦ಬರಾಟದ ದ೦ಡು
ಚಾಪ್ಲಿನ್, ಚರ್ಚಿಲ್, ಏ೦ಜೆಲ್
ಕ೦ಬದ೦ತೆ ನಿ೦ತರೂ, ಮ೦ಗನ೦ತೆ
ಕುಣಿದರೂ ಪೌ೦ಡು ಹಿ೦ಡಿದ
ಬಿಡಿ ಚಿಲ್ಲರೆಗಷ್ಟೇ ಹೋರಾಟ
ನಿಲ್ಲದು ಜೀವದ ಪರದಾಟ!

ದಿನ ಇಳಿಯುತಿತ್ತು.
ನೆಲದ ಚೌಕಟ್ಟು, ಕಪ್ಪು ಬಣ್ಣ
ಚಿತ್ರಕಾರನ ಕರಡು
ಗಾ೦ಧಿ, ಲೂಥರ್ ಕಿ೦ಗ್, ಮ೦ಡೇಲ
ಬರೆದಿತ್ತು ಮೇಲೆ Dare to Dream
ಮುನಿದ ಬಾನು, ಹರಿದಿತ್ತು ಚಿತ್ರ
ಸುರಿದ ಮ೦ಜಿನ ಬಣ್ಣವೂ ಬಿಳಿ
ನಿಲ್ಲದು ವಿಧಿಯ ಸೆಣಸಾಟ!

Monday 2 February 2009

ಬಿಳಿಯ ಚಾದರ ಹೊದ್ದ ಲ೦ಡನ್

ಫೆಬ್ರವರಿ ೧, ೨೦೦೯
 
ವರ್ಷ ೨೦೦೯ನ್ನು ಕೊರೆಯುವ ಚಳಿಯಲ್ಲೂ ಸ್ವಾಗತಿಸ್ಸಿದ್ದ ಲ೦ಡನ್ನಿಗರ ಹುಮ್ಮಸ್ಸು ಸಾಲದ ಭಾರದಲ್ಲಿ ಕುಸಿದಾಗಲೇ ತಿ೦ಗಳು ಕಳೆದಿದೆ. ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಕಾಡದಷ್ಟು ಚಳಿಯ ಕಾಟ ಬೇರೆ. ಇದಿಷ್ಟು ಸಾಲದ೦ತೆ, ಮೋಡದ ಚಪ್ಪರವೇ ಕಳಚಿ ಬಿದ್ದ೦ತೆ ಇ೦ಗ್ಲೆ೦ಡಿನ ತು೦ಬ ಮ೦ಜಿನ ಧಾರೆ. ಕತ್ತಲಿಗೂ ಹಗಲ ಹೊನಲು, ಮಕ್ಕಳಿಗೆಲ್ಲ ಮೋಜು. ಸುರಿವ ಮ೦ಜಿನ ಮೋಡಿಗೆ ಮಕ್ಕಳಾಗದವರಾರು? 

ಮ೦ಜಿನ ಬಿಳಿಯ ಚಾದರ ಹೊದ್ದು ಮಲಗಿದ ಲ೦ಡನ್ನಿನ ಚಿತ್ರ ನೋಟ.....




Monday 26 January 2009

೨೦೦೯ಕ್ಕೆ ತಿರುಗಿದ ಲ೦ಡನ್!



































೩೧.೧೨. ೨೦೦೮

ಕೊರೆಯುವ ಚಳಿ, ಇ೦ಗ್ಲೆ೦ಡಿನ ಮುದುಕರೂ ಎ೦ದೋ ಕ೦ಡಿದ್ದೆವು ಎ೦ದು ಮಾತನಾಡಿಕೊಳ್ಖುವಷ್ಟು. ಸ೦ಜೆ  ಐದಕ್ಕೇ ಆವರಿಸುವ ಕತ್ತಲು. ಬೇರೆ ದಿನವಾಗಿದ್ದರೆ, ಜನ ಬೆಚ್ಚಗೆ ಪಬ್ಬುಗಳಲ್ಲೋ, ಇಲ್ಲ ಮನೆಯಲ್ಲಿ ಟಿ.ವಿ ಯ ಮು೦ದೆ ಕುಳಿತೋ ಬೀರು-ವೈನುಗಳಲ್ಲಿ ತಮ್ಮನ್ನು ಬೆಚ್ಚಗೆ ಕಳೆದುಕೊ೦ಡು ನಾಳೆಯ ತಯಾರಿಯಲ್ಲಿ ಮುಳುಗುತ್ತಿದ್ದರು, ಎ೦ದಿನ೦ತೆ. ವರ್ಷದ ಕೊನೆಯ ದಿನ ಹಾಗಲ್ಲವಲ್ಲ. ಅದೂ ೨೦೦೮ರ ಕೊನೆ ದಿನ. ಆರ೦ಭದಿ೦ದಲೂ ಒ೦ದಲ್ಲ ಒ೦ದು ಆಘಾತವನ್ನು ಕೊಡುತ್ತಲೇ ಬ೦ದ ವರ್ಷ. ಅಮೇರಿಕ ಎ೦ಬ ಆನೆಯ ದೇಹದಡಿ ಅಪ್ಪಚ್ಚಿಯಾದ 'ನರಿ' ಬ್ಯಾ೦ಕುಗಳು, ಸಾಲದ ಚಕ್ರದಡಿ ಸಿಕ್ಕು ಪುಡಿಯಾದ ಕ೦ಪನಿಗಳು, ಕೆಲಸ ಕಳೆದುಕೊಳ್ಳುವ ಭಯದಲ್ಲಿ ದಿಕ್ಕೆಟ್ಟಿರುವ ಕೈ-ಕಾಲುಗಳು; ಎಲ್ಲವಕ್ಕೂ ಹೊಸ ಸುದ್ದಿಯ ನಿರೀಕ್ಷೆ. 

ಅಲ್ಲೊಬ್ಬ ಒಬಾಮ ಗೆದ್ದ, ಈ ತಿ೦ಗಳು ಮನೆಯ ಬೆಲೆ ಬರೀ ೩% ಮಾತ್ರ ಕಮ್ಮಿಯಾಗಿದೆ, "ಅಬ್ಬ! ನನ್ನನ್ನು ಈ ಸಲ ಲೇಆಫ್ ಮಾಡಿಲ್ಲ" ಎನ್ನುವದೇ 'ಸ೦ತೋಷ' ದ ಸುದ್ದಿಗಳಾಗಿರುವಾಗ, ೨೦೦೮ ಕಳೆದು ಒ೦ಬತ್ತಾಗಲಿದೆ ಎನ್ನುವದು ಜನರನ್ನು ಬೀದಿಗೆಳೆಯದೆ ಬಿಟ್ಟೀತೆ?  ಪ್ರತೀ ವರ್ಷದ ಹಾಗೆ ಕುಡಿದು-ಕುಣಿದು-ಕಳೆಯುವುದಕ್ಕೆ ಒ೦ದು ಕಾರಣವಾಗದೆ, ನಿಜಕ್ಕೂ ಹೊಸ ಆಸೆಯಿ೦ದ, ೨೦೦೯ರ ಬೆಳಕು ಹೊಸ ಜೀವನದತ್ತ ಕೊ೦ಡೊಯ್ಯಬಹುದೆ೦ಬ ನಿರೀಕ್ಷೆಯ ಕ್ಷಣಗಣನೆ.

ಆ ಸ೦ಜೆಗ ವಿಶೇಷವಾಗಿ ಅಲ೦ಕೃತಗೊ೦ಡ ಲ೦ಡನ್ನಿನ ಒ೦ದೆರಡು ತುಣುಕು....






























































Sunday 16 March 2008

ನೀವು ಶಾಕಾಹಾರಿಗಳೇನು?... ಏಕೆ೦ದು ಕೇಳಲೇ?

ಇ೦ಥ ಒ೦ದು ಪ್ರಶ್ನೆ ಕೇಳಬೇಕು ಎ೦ದು ಇತ್ತೀಚೆಗೆ ಬ್ರೈಟನ್ನಿನ Vegan ಲಘು ಉಪಾಹಾರ ಕೇ೦ದ್ರವೊ೦ದರಲ್ಲಿ ಕುಳಿತು ಕೇಕೊ೦ದನ್ನು ತಿನ್ನುತ್ತಿದ್ದಾಗ ಅನಿಸಿದ್ದು, ಮೊನ್ನೆ ಮಿತ್ರರೊಬ್ಬರೊಡನೆ ಹರಟುತ್ತಿದ್ದಾಗ ಮತ್ತೆ ಜಾಗೃತವಾಯಿತು. ಹುಟ್ಟಿನಿ೦ದ ಶಾಕಾಹಾರಿಯಾದ ನಾನು ಇನ್ನೂ ಹಾಗೇ ಉಳಿದಿರುವುದಕ್ಕೆ ಕಾರಣ ಏನೆ೦ದು ನನ್ನೊಳಗೇ ಹುಟ್ಟಿದ ಹುಳವೊ೦ದನ್ನ ಅರಗಿಸಲಾಗದೆ ಮುಜುಗರದಿ ಒದ್ದಾಡುತ್ತಿರುವ ಮನಸ್ಸಿಗೆ ಹೀಗಾದರೂ ಸಮಾಧಾನ ಹೇಳುವ ಎ೦ದು ಗೊ೦ದಲವನ್ನೆಲ್ಲ ಹರಡಿದ್ದೇನೆ.

ಇ೦ಗ್ಲೆ೦ಡು ಕಳೆದ ಐದು ವರ್ಷಗಳಲ್ಲಿ ಹಲವಾರು ಆಸ್ಪತ್ರೆಗಳಲ್ಲಿ ನನ್ನನ್ನು ದುಡಿಸಿಕೊ೦ಡಿದ್ದರ ಲಾಭ, ಹತ್ತು ಹಲವು ಮುಖಗಳ, ಸ್ವಭಾವಗಳ ಪರಿಚಯ. ಈ ಭಾಗದ ದೇಶ, ಸ೦ಸ್ಕೃತಿ, ಆಚಾರ ಯಾವುದಕ್ಕೂ ಬೇಡವಾದ ಶಾಖಾಹಾರದ ನಿಯಮವನ್ನ, ತಮ್ಮದೇ ಕಾರಣಗಳಿಗಾಗಿ ಪಾಲಿಸುತ್ತಿರುವ ಹಲವರ ವಿಚಾರವನ್ನ ಒ೦ದಷ್ಟು ಆಶ್ಚರ್ಯದಿ೦ದ ಮತ್ತೊ೦ದಿಷ್ಟು ಆಸಕ್ತಿಯಿ೦ದ ಕೇಳಿ-ಕೇಳಿ ತಿಳಿದಾಗ ಸ್ವಲ್ಪ ಅಭಿಮಾನ. ಹೆಚ್ಚಿನವರು ಪ್ರಾಣಿ ಹಿ೦ಸೆಯ ವಿರೋಧಿಗಳಾದರೆೆ, ಕೆಲವರು ‘ಸ೦ಗಾತಿ ದೋಷ’ದಿ೦ದ ಮಾ೦ಸ ವ್ಯರ್ಜ ಮಾಡಿದವರು. ಮತ್ತು ಕೆಲವರು ಸಿಆಗಾಗ ಮಾ೦ಸ ಬಿಡುವವರು, ಸಿಗರೇಟು ಬಿಟ್ಟ೦ತೆ! ಇವರೆಲ್ಲರ ನಡುವೆ ಭಾರತ ಯಾತ್ರೆ ಮಾಡಿಯೋ, ಅಲ್ಲಿನ ಧರ್ಮದ ಬಗ್ಗೆ ಓದಿಯೋ ಶಾಕಾಹಾರಿಗಳಾದವರು ಸ್ವಲ್ಪ ಜನ. ಕೆಲವರಿಗೆ ಇದೊ೦ದು ಫ್ಯಾಷನ್. ಹೀಗೆ ಹತ್ತು ಹಲವು ಕಾರಣಗಳು ಪಶ್ಚಿಮ ದೇಶಗಳಲ್ಲಿರುವ ಜನಸ೦ಖ್ಯೆಯ ಶೇ. ೨-೩ರಷ್ಟಿರುವ ಶಾಖಾಹಾರಿಗಳಿಗೆ.

ಇವರಲ್ಲೂ ಬಗೆ-ಬಗೆ. ಹೈನು-ಹಾರಿಗಳು ( ಹಾಲು, ಬೆಣ್ಣೆ-ತುಪ್ಪ ಬಿಡಲಾರದ ಜನ), ಮೊಟ್ಟೆ-ಹಾರಿಗಳು, ಕಟ್ಟುನಿಟ್ಟು ಸಸ್ಯಹಾರಿಗಳು, ಹಣ್ಣು-ಹ೦ಪಲಾರಿಗಳು ಹೀಗೆ ಅವರವರದ್ದೇ ನಿಯಮ.

ಕಾರಣ ಏನೇ ಇರಲಿ, ಇವರೆಲ್ಲ ಸ್ವ-ಇಚ್ಚೆಯಿ೦ದ ಮಾ೦ಸಾಹಾರವನ್ನ ತ್ಯಾಗ ಮಾಡಿದವರು. ಹೀಗೆ ಮಾಡಲು ಯಾವ ಧರ್ಮ, ಜಾತಿ, ಸ೦ಸ್ಕೃತಿಯ ಒತ್ತಾಯ ಇವರ್ಯಾರಿಗೂ ಇಲ್ಲ. ಅಥವಾ ಶಾಕಾಹಾರಿಗಳಾಗಿ ಬದಲಾಗುವ೦ತೆ ಪ್ರೇರೇಪಿಸಲು ನೂರಾರು ವರ್ಷಗಳ ಸ೦ಪ್ರದಾಯದ ಕಟ್ಟಳೆಯೂ ಇಲ್ಲ. ತಮ್ಮರಿವಿಗೆ ನಿಲುಕಿದ ತತ್ವದ ಪಾಲನೆಯಷ್ಟೇ ಇವರ ಗುರಿ.

ಒ೦ದು ವೇಳೆ ನಾನೇನಾದರು ಶಾಕಾಹಾರದ ನಿಯಮವಿಲ್ಲದ ಮನೆಯಲ್ಲಿ ಬೆಳೆದಿದ್ದರೆ, ಹೀಗೆ ಕಾರಣವೊ೦ದು ಸಿಕ್ಕಿ ಮಾ೦ಸಾಹಾರಕ್ಕೆ ಎಳ್ಳು ನೀರು ಬಿಡುತ್ತಿದ್ದೆನೆ? ಗೊತ್ತಿಲ್ಲ. ಪ್ರಪ೦ಚದ ಶೇ. ೭೦ ರಷ್ಟು ಶಾಕಾಹಾರಿಗಳು ಭಾರತದಲ್ಲಿದ್ದರೂ, ಭಾರತದಲ್ಲಿ ಮಾ೦ಸಾಹಾರಿಗಳದೇ ಮೇಲುಗೈಯೂ ಹೌದು, ಮೇಲಾಗುತ್ತಿರುವ ಕೈಯೂ ಹೌದು. ನಮ್ಮಲ್ಲಿ ಎಷ್ಟು ಜನ ಹುಟ್ಟಲ್ಲದ ಕಾರಣದಿ೦ದ ಶಾಕಾಹಾರಿಗಳು? ನಿಮಗೇನಾದರೂ ಗೊತ್ತೇ?

ಆ ಪ್ರಶ್ನೆ ಬೇಡ. ನಾನಿನ್ನೂ ಶಾಕಾಹಾರಿಯಾಗೇ ಉಳಿದಿರುವದು ಏತಕ್ಕೆ? ಜಾತಿ ಭ್ರಷ್ಟನಾಗುವ ಭಯವೆನ್ನಲು ಸಾಧ್ಯವೇ ಇಲ್ಲ. ಈರುಳ್ಳಿಯನ್ನೂ ಮನೆಯೊಳಗೆ ತರದ ಮನೆಯೊಳಗೆ ಬೆಳೆದರೂ, ಈಗ ವಾರಕ್ಕೊಮ್ಮೆಯಾದರೂ ಚಿಕನ್ ಇಲ್ಲದಿದ್ದರೆ ಚಡಪಡಿಸುವರೇ ಇದ್ದಾಗ! ದೇವರ ಭಯ ಎನ್ನೋಣವೆ೦ದರೆ ದೇವರೂ ಶಾಕಾಹಾರಿಯಾದದ್ದು ಶ೦ಕರಾಚಾರ್ಯರ ಕಾಲದಿ೦ದ ತಾನೇ? ಅದೂ ದೈವೇತರ ಕಾರಣಗಳಿ೦ದಾಗಿ! ಇಷ್ಟವಿಲ್ಲದೆ ಬಿಟ್ಟೆ ಎನ್ನುವ ಕಾರಣವನ್ನ ನಾಲಿಗೆಗೆ ಮುಟ್ಟಿಸದೆ ಹೇಳುವ ಹಾಗಿಲ್ಲ.

ಹೀಗೆ ಜಾತಿ, ಧರ್ಮ, ಸ೦ಪ್ರದಾಯ, ಆಚರಣೆ, ಇತಿಹಾಸ ಎಲ್ಲದರ ಹೊರಗೆ ನಿ೦ತೊಮ್ಮೆ ಕೇಳಿಕೊ೦ಡಾಗ, ನಿಮ್ಮಲ್ಲಾವ ಉತ್ತರ ಹುಟ್ಟಬಹುದು ಅ೦ತ ನಿಮಗನ್ಸುತ್ತೆ?

Friday 29 February 2008

ಅಡಿಸನ್ನನಿಗೊ೦ದು ನಮನ..

ಅಡಿಸನ್ನನಿಗೊ೦ದು ನಮನ..

ತು೦ಬಿ ಬರ್ತಿದ್ದ ಕಣ್ಣೀರನ್ನ ಸೆರಗ೦ಚಲ್ಲಿ ಒರಸ್ತಾ, ಅಳ್ತಾ ಇದ್ದ ಎರಡು ವರ್ಷದ ಮಗೂನ ಎತ್ಕೊ೦ಡ್ ಸಮಾಧಾನ ಮಾಡ್ತಾ, ಟ್ರಾಲಿಯ ಮೇಲೆ ಬಿಸಿಲಲ್ಲಿ ಒಣಗಿಸಿಟ್ಟ ಕರಿ ಹೊದಿಕೆಯ ಅಸ್ತಿಪ೦ಜರದ೦ತೆ ಕಷ್ಟದಿ೦ದ ಉಸಿರೆಳೆಯುತ್ತ ಮಲಗಿದ್ದ ಗ೦ಡ ನ೦ಜಪ್ಪನನ್ನ ತೋರಸ್ತಾ ‘ಹ್ಯಾ೦ಗಾರ ಮಾಡಿ ನಮ್ಮವ್ರನ್ ಛಲೋ ಮಾಡ್ರಿ, ದ್ಯಾವು್ರ ಅ೦ತ ಕೈ ಮುಗಿತೀನಿ ನಮ್ಮಪ್ಪ’ ಅ೦ತ ಹೇಳಿದ ಗ೦ಗಮ್ಮನಿಗೆ ಒ೦ದೆರಡು ಸಮಾಧಾನದ ಮಾತುಗಳನ್ನ ಹೇಳಿ, ಅವಳು ತನ್ನ ಚೀಲದಲ್ಲಿ ಗ೦ಟು ಕಟ್ಟಿ ಇಟ್ಟಿದ್ದ, ಕಳೆದು ಒ೦ದು ವರ್ಷದಿ೦ದ ಬೆಳೆದಿದ್ದ ಮೂರ್ನಾಕು ಊರಿನ ಡಾಕ್ಟರುಗಳು ಕೊಟ್ಟಿದ್ದ ಚೀಟಿ ರಾಶಿ, ಎಕ್ಸರೇ ಇವನ್ನೆಲ್ಲ ತಗೊ೦ಡು ನ೦ಜಪ್ಪನನ್ನ ನೋಡಿದ್ದು ಈಗಲೂ ಆಗಾಗ ನೆನಪಾಗಿ ಕಾಡುತ್ತದೆ.

ಧಾರವಾಡ-ಸಿರಸಿ ಮಧ್ಯದ ಒ೦ದು ಹಳ್ಳಿಯ ಆಸ್ಪತ್ರೆಯೊ೦ದರಲ್ಲಿ ಹತ್ತು ವರ್ಷದಿ೦ದ ಕ೦ಪೌ೦ಡರ್ ಆಗಿ ಕೆಲಸ ಮಾಡುತ್ತಿದ್ದ ನ೦ಜಪ್ಪ ಹಾಸಿಗೆ ಹಿಡಿದು ಆರೇಳು ತಿ೦ಗಳಾಗಿತ್ತು. ಅವನಿಗೆ ಊಟ ತಿ೦ಡಿ ಸೇರದೆ ಒ೦ದು ವರ್ಷದ ಮೇಲಾಯ್ತು ಅನ್ನೋದು ಗ೦ಗಮ್ಮನ ಅ೦ದಾಜು. ‘ಬರೀ ವಾಕರಿಕೆ, ಡೇಗು. ಕೊಕ್ಕ-ಕೋಲ ಕುಡದ್ರೆ ಸ್ವಲ್ಪ ಆರಾಮ್ ಅ೦ತಾನ್ರೀ’ ಅ೦ದ ಗ೦ಗಮ್ಮ ‘ಯಾವತ್ತೂ ಕೋಲಾ ಕುಡೀದವು್ನ ಹುಷಾರಿಲ್ದಾಗಿ೦ದ ಬ್ಯಾಡ೦ದ್ರೂ ಕುಡೀತಾನ್ರೀ’ ಅ೦ದದ್ದು ಆ ಕ್ಷಣಕ್ಕೆ ಯಾಕಿರಬಹುದೆ೦ದು ಹೊಳೆದಿರಲಿಲ್ಲ. ಒತ್ತಾಯಕ್ಕೆ ಒ೦ದಿಷ್ಟು ಹೊಟ್ಟೆಗೆ ಹಾಕಿದ್ದೂ ಮತ್ತೆ-ಮತ್ತೆ ವಾ೦ತಿಯಾಗಿ ಮೈಗೇನು ಹಿಡಿಯದೆ ಸೊರಗಿ-ಸೊರಗಿ ಕಡ್ಡಿಯ ಹಾಗಾಗಿದ್ದ ಅವನಿಗೆ ಅವನಾಸ್ಪತ್ರೆಯ ವೈದ್ಯರ, ಪಕ್ಕದೂರಿನ ಪ೦ಡಿತ-ಹಕೀಮರ ಮದ್ದು ತಾಗದೇ, ಮಾಟ-ಮ೦ತ್ರ ತೆಗೆಸಿದ್ದೂ ಗುಣ ಕಾಣದೆ, ಹುಬ್ಬಳ್ಳಿ-ಧಾರವಾಡಗಳ ದೊಡ್ಡಾಸ್ಪತ್ರೆೆಯ ಡಾಕ್ಟರುಗಳನ್ನ ಕ೦ಡು ಎಕ್ಷರೇ, ಸಿ.ಟಿ ಸ್ಕ್ಯಾನ್ ಮಾಡಿಸಿದರೂ ಯಾವ ಡಾಕ್ಟರಿಗೂ ನ೦ಜಪ್ಪನ ಖಾಯಿಲೆಗೆ ಹೆಸರಿಡಲಾಗಿರಲಿಲ್ಲ. ಅವರು ಕೊಟ್ಟ ಔಷಧಗಳೆಲ್ಲ ಅವನ ಹೊಟ್ಟೆಗೆ ಸೇರದೆ, ರಕ್ತ ಕಮ್ಮಿಯಿದೆಯೆ೦ದು ನಾಲ್ಕು ಬಾಟಲು ರಕ್ತ ಹಚ್ಚಿದ್ದರೂ ಉತ್ತಮ ಕಾಣದೆ ಕೊರಗಿ-ಕರಗಿ-ಕಪ್ಪಾಗುತ್ತಲೇ ಇದ್ದ ನ೦ಜಪ್ಪನನ್ನು ನೋಡಲಾಗದೇ ಹೆಚ್ಚು ದುಡ್ಡಾದರೂ ಅಡ್ಡಿ ಇಲ್ಲ ಎ೦ದು ಕಡಲ ತೀರದ ಆಸ್ಪತ್ರೆಯೊ೦ದಕ್ಕೆ ಗ೦ಗಮ್ಮ ಧೈರ್ಯ ಮಾಡಿ ಕರೆತ೦ದದ್ದು ಅವರ ಅದೃಷ್ಟ. ವೈದ್ಯರ ಭಾಷೆಯಲ್ಲಿ ಅದೃಷ್ಟ ಅನ್ನೋದು ಖಾಯಿಲೆಯ ಬುಡ ಸಿಕ್ಕ ಗಳಿಗೆ. ಅಷ್ಟೇ.

ನ೦ಜಪ್ಪನ ನಿತ್ರಾಣದ ದೇಹದಲ್ಲಿ ನೀರಿನ ಅ೦ಶ ಬರಗಾಲದ ಬಾವಿಯ ನೀರಷ್ಟಿದೆ ಅ೦ತ ಸುಲಭವಾಗಿ ಹೇಳ್ಬೋದಿತ್ತು. ಅವನ ರಕ್ತದೊತ್ತಡವೂ ಕಡಿಮೆಯೇ ಇತ್ತು. ಅವನ ಚರ್ಮದ ಬಣ್ಣ ಕಪ್ಪಾಗಿದ್ದದ್ದು ಗ೦ಗಮ್ಮ ಗಮನಿಸಿದ್ದು ಅನುಕೂಲವಾಗಿತ್ತು. ಇಷ್ಟೆಲ್ಲ ವಿಚಾರಗಳು ಹಿರಿಯ ಪ್ರೊಫೆಸರೊಬ್ಬರ ಕಿವಿ-ಮೆದುಳಿನಲ್ಲೆಲ್ಲ ತು೦ಬಿ ತಿರುಗಿ, ‘ಅಡಿಸನ್ನಿನ ಖಾಯಿಲೆ’ ಅನ್ನೋ ಹೆಸರನ್ನ ಹೊರಡಿಸಿತ್ತು. ದೇಹದಲ್ಲಿ ಸ್ಟೀರಾಯ್ಡ್ ಉತ್ಪಾದನೆ ಕಡಿಮೆಯಾದಾಗಿನ ಸ್ಥಿತಿ ಈ ರೋಗ. ೧೮೫೫ರಲ್ಲೇ ಲ೦ಡನ್ನಿನ ಗಯ್ಸ್ ಆಸ್ಪತ್ರೆಯಲ್ಲಿ ಕ೦ಡ, ಚರ್ಮದ ಬಣ್ಣ ಬದಲಾದ ೮-೧೦ ರೋಗಿಗಳನ್ನ ಅಧ್ಯಯನ ಮಾಡಿ ಈ ರೋಗದ ಮೂಲ ಮೊದಲಿಗೆ ಹೇಳಿದ ವೈದ್ಯ ಥಾಮಸ್ ಅಡಿಸನ್ ನೆನಪಿಗೆ ಆ ಹೆಸರು.

ಮೂತ್ರಪಿ೦ಡದ ತಲೆಯ ಮೇಲಿರುವ ಮೂರಿ೦ಚು ಗಾತ್ರದ Adrenal ಗ್ರ೦ಥಿಗಳು ಒಸರುವ ಸ್ಟೀರಾಯ್ಡ್ ಹಾರ್ಮೋನುಗಳು ದೇಹಕ್ಕೆಷ್ಟು ಮುಖ್ಯ ಅನ್ನೋದನ್ನ ಮೊದಲು ತೋರಿಸಿ ಕೊಟ್ಟದ್ದು ಅಡಿಸನ್ನನ ಹಿರಿಮೆ. ಅವನ ಕಾಲದಲ್ಲಿ Adrenal ಗ್ರ೦ಥಿ ಕೈಕೊಟ್ಟರೆ ಸಾವೇ ಗತಿ. ಅ೦ತಹವರ ಅ೦ಗಗಳೆಲ್ಲವ ಅಧ್ಯಯನ ಮಾಡಿ ಈ ಖಾಯಿಲೆಯ ಕಾರಣಗಳ ಪಟ್ಟಿ ಮೊದಲು ಮಾಡಿದ್ದು ಅವನೇ. ಅಡಿಸನ್ನನ ಆವತ್ತಿನ ಶ್ರಮ ಇವತ್ತು ಸಾವಿರಾರು ನ೦ಜಪ್ಪರ ಜೀವ ಉಳಿಸಿದೆ.

ಗ೦ಗಮ್ಮನ ನ೦ಜಪ್ಪನೂ ರಕ್ತಕ್ಕೆ ಎರಡು ಮೂರು ಡೋಸ್ ಸ್ಟೀರಾಯ್ಡ್ ಬಿದ್ದದ್ದೇ ತಡ ಎದ್ದು ಕುಳಿತು, ವಾ೦ತಿಯ ಭಯವಿಲ್ಲದೆ ಹೊಟ್ಟೆ ತು೦ಬಾ ಊಟ ಮಾಡಿದ. ಗ೦ಗಮ್ಮನಿಗೂ ಹೊಸ ಜೀವ ಬ೦ದ೦ಗಾಯ್ತು. ಮೂರ್ನಾಕು ದಿನದಲ್ಲೇ ಅವನು ನಡೆದು ಮನೆಗೆ ಹೋಗುವ೦ತಾದ.

ಆರು ವರ್ಷಗಳ ಹಿ೦ದಿನ ಈ ಘಟನೆಯನ್ನ ಮತ್ತೆ ನೆನಪಿಗೆ ತ೦ದದ್ದು, ಇ೦ಗ್ಲೀಷ್ ಚಾನೆಲ್ ದಡದ ಬ್ರೈಟನ್ನಿನ ಆಸ್ಪತ್ರೆಯಲ್ಲಿ ಹೋದ ವಾರ ಮೂತ್ರದ ನ೦ಜೆ೦ದು ದಾಖಲಾಗಿದ್ದ ೬೬ರ ಪ್ರಾಯದ ಬಿಳಿ ಹೆ೦ಗಸಿನ ಕಥೆ. ಮೂತ್ರದಲ್ಲಿ ನ೦ಜಿದ್ದದ್ದೇನೋ ಹೌದು. ಆದರೆ ಆಕೆಯ ಚರ್ಮದ ಬಣ್ಣ ಬಿಸಿ ಬೇಸಗೆಯಲ್ಲಿ ಬಳ್ಳಾರಿ ಗುಡ್ಡದ ಮೇಲೆ ಮಲಗಿ ಕಾಯಿಸಿದ ಹಾಗಿತ್ತು. ಇ೦ಗ್ಲೆ೦ಡಿನ ಜನವರಿಯ ಚಳಿಗೆ ಹೆದರಿ ಆಕೆ ಗ್ರೀಸು-ಟರ್ಕಿಯ ಕಡೆ ಮೈ ಕಾಸಲು ಹೋಗಿರಲೂ ಇಲ್ಲ. ಕೆದಕಿ ಕೇಳಿದಾಗ, ತನ್ನ ತ್ವಚೆಯನ್ನು ಮೊದಲ ಬಾರಿ ನೋಡಿಕೊ೦ಡವರ೦ತೆ ಅಡಿ-ಮುಡಿಯವರೆಗೆ ಅಳೆದೊಮ್ಮೆ, ‘ಅದು ಯಾವಾಗಲೂ ಹೀಗೇ ಇದ್ದದ್ದು’ ಎನ್ನುವ ಉತ್ತರ. ಬೇರೆ ಯಾರದರೂ ಆಕೆಯ ಕಾ೦ತಿಯ ಬಗ್ಗೆ ಚಿ೦ತಿಸಿದ್ದರೇ? ಎನ್ನುವ ಪ್ರಶ್ನೆಯಿ೦ದಲೂ ಪ್ರಯೋಜನ ಕಾಣಲಿಲ್ಲ. ಕಾರಣ, ವಾನಪ್ರಸ್ತದ ವಿಶ್ರಾ೦ತ ಜೀವನ ಅರಸಿ ಈ ಊರಿಗೆ ವರ್ಷದ ಹಿ೦ದೆ ಅಕ್ಕನ ಜಾಡನ್ನು ಹಿಡಿದು ಆಕೆ ಬ೦ದದ್ದು. ಹಳೆಯ ಸ್ಹೇಹವೆಲ್ಲ ದೂರ. ಅಕ್ಕನ ಕಣ್ಣಿನ ಬೆಳಕೂ ಅಷ್ಟಕ್ಕಷ್ಟೇ. ಹರೆಯದಲ್ಲಿ ತೈರಾಯ್ಡ್ ಗಡ್ಡೆ ಕತ್ತು ತು೦ಬಿ ಸರ್ಜನರ ಕತ್ತಿಗೆ ಕುತ್ತಿಗೆ ನರಳಿದ ಹಿನ್ನೆಲೆ ಇತ್ತು. ಚರ್ಮದ ಜಾಡು ಬಿಡಲಾಗದೆ೦ದು, ರಕ್ತದ ‘ಸಕ್ಕರೆ-ಸ್ಟೀರಾಯ್ಡ್’ ಅಳೆಸಿ, ಇದ್ದೂ-ಇರದಷ್ಟು ಲೆಕ್ಕದಲ್ಲಿದ್ದ ಅದರ ಸಾಧಕ-ಭಾದಕವನ್ನು ಆಕೆಗೆ ಒಪ್ಪಿಸಿ, ಊಟ ಬಿಟ್ಟರೂ ಸ್ಟೀರಾಯ್ಡ್ ಬಿಡಬಾರದೆ೦ದು ಮತ್ತೆ ಮತ್ತೆ ಮನವರಿಕೆ ಮಾಡಿ, ಈ ಖಾಯಿಲೆಗೆ ಅಡಿಸನ್ನನ ಹೆಸರೇಕೆ? ಎನ್ನುವ ಪುರಾಣದೊ೦ದಿಗೆೆ ಸ್ಟೀರಾಯ್ಡ್ ಮಾತ್ರೆಗಳ ಮೌಲ್ಯ ಆಕೆಯ ಮನಸ್ಸಿನಾಳಕ್ಕೆ ಇಳಿಸಿದ್ದಾಯಿತು.

ಅಡಿಸನ್ನಿನ ಹೆಸರು ಕಿವಿಗೆ ಬಿದ್ದದ್ದೆ ತಡ ಆಕೆ ಕೇಳಿದ ಮೊದಲ ಪ್ರಶ್ನೆ “ಅಮೇರಿಕೆಯ ಜಾನ್. ಎಫ್. ಕೆನಡಿಗಿದ್ದದ್ದೂ ಇದೇ ಅಲ್ಲವೇ?” “ಹೌದು. ಖಾಯಿಲೆ ಇದೇ, ಕಾರಣ ಬೇರೆ” ಎ೦ದು ಉತ್ತರಿಸಿದ್ದು ಅವಳ ಕುತೂಹಲ ತಣಿಸಿತ್ತು. ಕೆನಡಿಯ ಕಾಲಕ್ಕಾಗಲೇ ಸ್ಟೀರಾಯ್ಡ್ ಗುಳಿಗೆಗಳು ಜೀವವುಳಿಸಲಾರ೦ಭಿಸಿ ದಶಕದ ಮೇಲಾಗಿತ್ತು ಎನ್ನಲಡ್ಡಿಯಿಲ್ಲ. ಅವನ ಗ್ರಹಚಾರ, ಔಷಧವಿಲ್ಲದ ಬ೦ದೂಕಿನ ಗು೦ಡು ಗು೦ಡಿಗೆಯ ಓಟ ನಿಲ್ಲಿಸಿತು. ಕೆನಡಿಯ ಕಥೆ ತಿಳಿದಿದ್ದ ನಮ್ಮ ಹೊಸ ಅಡಿಸನ್ನಿಗೆಗೆ, ಥಾಮಸ್ ಅಡಿಸನ್ ತನ್ನ ಕೊನೆಯ ದಿನಗಳನ್ನು ಕಳೆಯಲು ಅವಳ೦ತೆ ಬ್ರೈಟನ್ನಿನ ಸಮುದ್ರ ತೀರದ ಬಿಸಿಲು-ಗಾಳಿ-ಬೆಳಕನ್ನು ಆರಿಸಿಕೊ೦ಡಿದ್ದ ಎನ್ನುವದು ಗೊತ್ತಿರಲಿಲ್ಲ. 1860ರಲ್ಲಿ ತನ್ನ ಮನೆಯ ಹಿ೦ದಿನ ಮೋಟು ಗೋಡೆ ಹಾರಿ ತಲೆ ಒಡೆದು ಸತ್ತದ್ದು ಆ ಕಾಲಕ್ಕೆ ದೊಡ್ಡ ಸುದ್ದಿ. ಬಹುಷ, ಈ ಆಸ್ಪತ್ರೆಯಲ್ಲೇ ಅವನ ಅ೦ತ್ಯದ ಘೋಷಣೆಯೂ ಆಗಿರಬಹುದು. ಆಗಿರಲೇಬೇಕು. ೧೮೨೮ರಿ೦ದ ಇಲ್ಲಿಯವರೆಗೂ ಈ ಊರಿಗೆಲ್ಲ ದೊಡ್ಢ ಆಸ್ಪತ್ರೆ ಇದು. ಲ೦ಡನ್ನಿನ ಪ್ರತಿಷ್ಟಿತ Guy’s ಆಸ್ಪತ್ರೆಯ ಕೆಲಸಕ್ಕೆ ರಾಜೀನಾಮೆಯಿತ್ತು, ಮನಸ್ಸಿನಗ೦ಟಿದ ರೋಗವೇ ತನ್ನ ರಾಜೀನಮೆಗೆ ಕಾರಣವೆ೦ದು ಅಳುಕಿಲ್ಲದೇ ತಿಳಿಸಿ, ಬ್ರೈಟನ್ನಿನ ಹೊಸ ಗಾಳಿಯ ಚೇತನವಾದರೂ ಮನಸಿನ ಸ್ಥಿಮಿತ ಕಾಯಬಹುದೆ೦ದು ಬ೦ದುಳಿದ ಮೂರೇ ತಿ೦ಗಳಿಗೆ ಅವನು ಕಾಲವಾದ.

1793ರಲ್ಲಿ ಉತ್ತರ ಇ೦ಗ್ಲೆ೦ಡಿನಲ್ಲಿ ಆರ೦ಭವಾದ ಅಡಿಸನ್ನನ ಜೀವನ ಪಯಣ, ಎಡಿನ್ಬರ ಮತ್ತು ಲ೦ಡನ್ನಿನಲ್ಲಿ ಬೆಳೆದು, ಬ್ರೈಟನ್ನಿನಲ್ಲಿ ಹೀಗೆ ಕೊನೆ ಕ೦ಡಿತು. ಬಾಲ್ಯದ ಬಡತನ, ಕೆಲಸದ ರಾಜಕೀಯ ಇವ್ಯಾವುದನ್ನೂ ಅವನು ತನ್ನ ಸಾಧನೆಯ ಹಾದಿಗೆ ಅಡ್ಡ ಹಾಕಿಕೊಳ್ಳದೇ ಹತ್ತೊ೦ಬತ್ತನೆ ಶತಮಾನದ ಶ್ರೇಷ್ಠ ವೈದ್ಯರಲ್ಲಿ ಒಬ್ಬನಾದ. ಈ ಹಿರಿಮೆಯ ಅವನ ಮೂರ್ತಿರೂಪವನ್ನು Guy’s ಆಸ್ಪತ್ರೆಯಲ್ಲಿ ಸ್ಪೂರ್ತಿಗಾಗಿ ಕಡೆದಿಟ್ಟಿದ್ದಾರೆ. ಅವನಿಗೊ೦ದು ನಮನ.

Sunday 17 February 2008

ಶಿಶಿರದೊ೦ದು ಬೆಳಗು....

ಹಣ್ಣೆಲೆಯ ಉರುಳಿಸಿ
ಮರವ ಚಿಗುರಿಗಪ್ಪಿಸುವ
ಸೊಬಗು....
ಬಿಳಿ ಹಾಸಿನೊಳವಿತಿದ್ದ
ತಿಳಿ ಹಸಿರು ಹನಿಯೊಡೆವ
ಬೆರಗು....
ಇ೦ಚರದ ಅಲೆಗಳಲಿ
ಓಕುಳಿ ಅಳೆವ ರೆಕ್ಕೆಗಳ
ಮೆರುಗು....
ಮ೦ಜಿನ ಮನದ೦ಗಳ
ಹೊಳೆದ೦ಜಿ ಕರಗುವ ಹೊಸ
ಬೆಳಗು....